×
Ad

ಫ್ಯಾಕ್ಟ್ ಚೆಕ್: ರಸ್ತೆಗೆ ಉಗುಳಿದ್ದಕ್ಕೆ "ಹಣ್ಣಿಗೆ ಉಗುಳಿದ ವ್ಯಾಪಾರಿ" ಎಂದು ಸುದ್ದಿ ಮಾಡಿದ ಟಿವಿ 5 ಕನ್ನಡ ಚಾನಲ್

Update: 2020-04-23 20:37 IST

ಬೆಂಗಳೂರು, ಎ.23: ಕೊರೋನ ಸೋಂಕು ಸಂಬಂಧ ನಿರ್ಧಿಷ್ಟ ಧರ್ಮದ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಜಾಲವೊಂದು ಸಕ್ರಿಯವಾಗಿದೆ. ಆದರೆ, ಇದೇ ಜಾಲಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಾರಿಯೊಬ್ಬರು ಹಣ್ಣುಗಳ ಮೇಲೆ ಉಗುಳಿದ್ದಾರೆ ಎನ್ನಲಾದ ವಿಡಿಯೊ ಪಡೆದು ಸುಳ್ಳು ಸುದ್ದಿ ಹಬ್ಬಿಸಿ ಟಿವಿ 5 ಕನ್ನಡ ಸುದ್ದಿ ವಾಹಿನಿ ಪೇಚಿಗೆ ಸಿಲುಕಿದೆ.

ಗುರುವಾರ ಇಲ್ಲಿನ ಜೆಪಿ ನಗರ ವ್ಯಾಪ್ತಿಯ ಸಾರಕ್ಕಿ ಬಳಿಯ 9ನೇ ರಸ್ತೆಯಲ್ಲಿ ಬೀದಿ ವ್ಯಾಪಾರಿಯೊರ್ವರು ದ್ರಾಕ್ಷಿ ಹಣ್ಣು ಮಾರಾಟ ಮಾಡುತ್ತಿದ್ದು, ಹಣ್ಣುಗಳ ಮೇಲೆ ಎಂಜಲು ಉಗಿದಿದ್ದಾರೆ ಎಂದು ಟಿವಿ 5 ಕನ್ನಡ ಸುದ್ದಿ ವಾಹಿನಿ ಸುದ್ದಿ ಪ್ರಸಾರ ಮಾಡಿದೆ. ಅಷ್ಟೇ ಅಲ್ಲದೆ, ಆತನನ್ನು ಜೆಪಿ ನಗರ ಠಾಣೆಯ ಪೊಲೀಸರಿಗೆ ವಶಕ್ಕೆ ನೀಡಿ, ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಿತ್ತು. ಆ ವಿಡಿಯೋದಲ್ಲಿ ವ್ಯಾಪಾರಿ ಹಣ್ಣುಗಳ ಮೇಲೆ ಉಗುಳುವ ದೃಶ್ಯವಿಲ್ಲ. ಆತ ಕ್ಷಮೆ ಯಾಚಿಸುತ್ತಾ "ನಾನು ಇಲ್ಲಿಗೆ ಉಗುಳಿದ್ದು" ಎಂದು ನೆಲ ತೋರಿಸುತ್ತಾನೆ. ಆದರೆ ಟಿವಿ ಚಾನಲ್ ಮಾತ್ರ ಪದೇ ಪದೇ "ಆತ ಹಣ್ಣುಗಳ ಮೇಲೆ ಉಗುಳಿದ ಪಾಪಿ, ಸಿಕ್ಕಿ ಬಿದ್ದ ಮೇಲೆ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಿದ್ದಾನೆ" ಎಂದು ಹೇಳಿದೆ. 

ಈ ಬಗ್ಗೆ ವಾರ್ತಾಭಾರತಿ ಪತ್ರಿಕೆ ಪರಿಶೀಲನೆ ನಡೆಸಿ ಜೆಪಿ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಿದಾಗ, ಈ ರೀತಿ ಕೃತ್ಯವನ್ನು ಆ ವ್ಯಾಪಾರಿ ನಡೆಸಿಲ್ಲ ಎಂದು ಅಲ್ಲಿನ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ವ್ಯಾಪಾರಿ ಮತ್ತು ವಿಡಿಯೊ ಮಾಡಿದ ವ್ಯಕ್ತಿಗೆ ಬೇರೆ ವಿಷಯಕ್ಕೆ ಜಗಳವಾಗಿದೆ. ಇನ್ನು, ಸಾರ್ವಜನಿಕರ ದೂರು ಹಿನ್ನೆಲೆ ವ್ಯಾಪಾರಿಯನ್ನು ಆಸ್ಪತ್ರೆಗೆ ದಾಖಲಿಸಿ ಪರಿಶೀಲನೆ ನಡೆಸಿದಾಗ ಆತನಲ್ಲಿ ಕೊರೋನ ಸೋಂಕಿನ ಯಾವುದೇ ಲಕ್ಷಣ ಇಲ್ಲ. ಆತನ ವಿರುದ್ಧ ಗಂಭೀರ ಸ್ವರೂಪದ ಆರೋಪ ಇರಲಿಲ್ಲ. ಹೀಗಾಗಿ, ದೂರನ್ನು ದಾಖಲಿಸಿಕೊಳ್ಳಲಿಲ್ಲ ಎಂದರು.

ಸುಳ್ಳು ಸುದ್ದಿ ವೈರಲ್: ‘ಹಿಂದೂ ಮಹಾಸಭಾ ಹಿಂದೂ ರಾಷ್ಟ್ರಸೇನಾ Hindu Maha Sabha’, ‘Namma Uttara Karnataka’ ಫೇಸ್ ಬುಕ್ ಪುಟಗಳಲ್ಲಿ ಮುಸ್ಲಿಮ್ ಬೀದಿ ವ್ಯಾಪಾರಿ ಕುರಿತ ಸುಳ್ಳು ಸುದ್ದಿಯನ್ನು ವೈರಲ್ ಮಾಡಲಾಗಿದೆ. ಅಲ್ಲದೆ, ಆ ವಿಡಿಯೊದಲ್ಲಿ ಆತ ಹಣ್ಣುಗಳ ಮೇಲೆ ಎಂಜಲು ಉಗಿಯುವ ದೃಶ್ಯವೇ ಇಲ್ಲ. ಆದರೂ, ಆತ ಕೃತ್ಯವೆಸಗಿದ್ದಾನೆ ಎಂದು ಅಪಪ್ರಚಾರ ಮಾಡಲಾಗಿದೆ. 

ಟಿವಿ 5 ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು
ಟಿವಿ 5 ಕನ್ನಡ ಸುದ್ದಿ ವಾಹಿನಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬೀದಿ ವ್ಯಾಪಾರಿಗಳ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ(ಎಐಸಿಸಿಟಿಯು) ಪ್ರಮುಖರಾದ ಕೆ.ಎಸ್.ವಿನಯ್ ಅವರು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಜೆಪಿ ನಗರ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಕೆ ಮಾಡಿದ್ದಾರೆ.


ಸುಳ್ಳು ಸುದ್ದಿ ವಿರುದ್ಧ ಕ್ರಮ ಕೈಗೊಳ್ಳಿ
ಕೊರೋನ ಸೋಂಕು ವಿರುದ್ಧ ಪ್ರತಿಯೊಂದು ಸಮುದಾಯ ಹೋರಾಟ ನಡೆಸುತ್ತಿದೆ. ಆದರೆ, ಕೆಲ ಕಿಡಿಗೇಡಿಗಳು ಮುಸ್ಲಿಮ್ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
-ಕೆ.ಎಸ್.ವಿನಯ್, ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ (ಎಐಸಿಸಿಟಿಯು)

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ tv5 ಸುದ್ದಿ ವಾಹಿನಿಯ ಸುದ್ದಿ ಸಂಪಾದಕ ರಾಮ್ ಪ್ರಸಾದ್, ಸಾರ್ವಜನಿಕ ನೀಡಿರುವ ಮಾಹಿತಿ ಆಧಾರದ ಮೇಲೆ ನಾವು ಸುದ್ದಿ ಮಾಡಿದ್ದು, ವಿಡಿಯೋದಲ್ಲಿ ವ್ಯಾಪಾರಿ ಎಂಜಲು ಉಗಿಯುವ ದೃಶ್ಯ ಇಲ್ಲ. ಆದರೆ, ತಪ್ಪು ಮಾಡಿಕೊಂಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.

ಅಲ್ಲದೆ, ನಾವು ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ. ನೀವು ಸಹ(ವಾರ್ತಾಭಾರತಿ ವರದಿಗಾರನನ್ನು) ಪೊಲೀಸರಂತೆ ನನ್ನನ್ನು ವಿಚಾರಣೆ ನಡೆಸಬೇಡಿ ಎಂದು ರಾಮ್ ಪ್ರಸಾದ್ ಖಾರವಾಗಿ ಪ್ರತಿಕ್ರಿಯಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News