ಗೂಂಡಾ ಕಾಯ್ದೆಯಡಿ ಶಾಸಕ ಝಮೀರ್ ರನ್ನು ಬಂಧಿಸಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಆಗ್ರಹ
ಬೆಂಗಳೂರು, ಎ. 25: ಇಲ್ಲಿನ ಪಾದರಾಯನಪುರ ಗಲಾಟೆ ನಡೆಸಿದ ಪುಂಡರಿಗೆ ಪ್ರಚೋದನೆ ನೀಡಿದ್ದೇ ಶಾಸಕ ಝಮೀರ್ ಅಹ್ಮದ್ ಖಾನ್. ಹೀಗಾಗಿ ಅವರನ್ನು ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಪಾದರಾಯನಪುರ ಗಲಾಟೆಗೆ ಮೂಲ ಕಾರಣವೇ ಚಾಮರಾಜಪೇಟೆ ಕ್ಷೇತ್ರದ ಶಾಸಕ ಝಮೀರ್ ಅಹ್ಮದ್ ಖಾನ್. ಈ ಸಂಬಂಧ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ ದೂರು ನೀಡಿದ್ದು, ಅದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕೈಗಾರಿಕೆಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು. ಶಿಕ್ಷಣ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಯಾವುದೇ ಖಾಸಗಿ ಸಂಸ್ಥೆಗಳು ಸಾರ್ವಜನಿಕರಿಂದ ಬಲವಂತದಿಂದ ಹಣ ವಸೂಲಿ ಮಾಡದಂತೆ ಸರಕಾರ ಅಗತ್ಯ ಮುನ್ನಚ್ಚರಿಕೆ ವಹಿಸಬೇಕೆಂದು ಬಿಜೆಪಿ ಮನವಿ ಮಾಡಿದೆ ಎಂದು ಕಟೀಲು ತಿಳಿಸಿದರು.
ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿನ ವಿರುದ್ಧ ಹೋರಾಟ ಮಾಡುತ್ತಿರುವ ವಾರಿಯರ್ಸ್ಗಳಾದ ವೈದ್ಯರು, ಆಶಾ ಕಾರ್ಯಕರ್ತರಿಗೆ ವಿಶೇಷ ಸಂಭಾವನೆ ನೀಡಬೇಕು. ಹೊರ ರಾಜ್ಯ ಹಾಗೂ ಬೇರೆ ದೇಶದಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆ ಮತ್ತು ಅವರಿಗೆ ಅಗತ್ಯ ನೆರವು ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.