ಜಿಲ್ಲೆಯಲ್ಲಿ ಕೈಗಾರಿಕೆ ತೆರೆಯಲು ಅವಕಾಶವಿಲ್ಲ: ರಾಮನಗರ ಜಿಲ್ಲಾಧಿಕಾರಿ

Update: 2020-04-29 19:10 GMT

ರಾಮನಗರ, ಎ.29: ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಅನುಸರಿಸಿ ರಾಜ್ಯ ಸರಕಾರ ಹೊರಡಿಸಿರುವ ಸೇರ್ಪಡೆ ಆದೇಶದಂತೆ ರಾಮನಗರ ಜಿಲ್ಲೆಯಾದ್ಯಂತ ಯಾವುದೆ ಕೈಗಾರಿಕೆಗಳನ್ನು ಪ್ರಾರಂಭಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಸ್ಪಷ್ಟ ಪಡಿಸಿದ್ದಾರೆ.

ಎ.19ರಂದು ಬೆಂಗಳೂರು ನಗರದ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾ ಕಾರಾಗೃಹದಲ್ಲಿರಿಸಿದ್ದ ಆರೋಪಿಗಳಲ್ಲಿ ಐದು ಮಂದಿಗೆ ಕೊರೋನ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಲ್ಲಿ 5 ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಬಫರ್ ಜೋನ್ ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವ್ಯಾಪ್ತಿಯಲ್ಲಿ ಹಾಲಿ ದೈನಂದಿನ ಅಗತ್ಯ ವಸ್ತುಗಳ ಪೂರೈಸುವ ಅಂಗಡಿಗಳನ್ನು ಹೊರತುಪಡಿಸಿ ಇತರೆ ಯಾವುದೇ ರೀತಿಯ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವಿರುವುದಿಲ್ಲ ಎಂದು ಅರ್ಚನಾ ವಿವರಿಸಿದ್ದಾರೆ.

ರಾಮನಗರ ನಗರ ವ್ಯಾಪ್ತಿ ಹೊರತುಪಡಿಸಿ ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾಲ್‍ಗಳು ಮತ್ತು ಬೃಹತ್ ಅಂಗಡಿ ಮಳಿಗೆಗಳನ್ನು ಹೊರತುಪಡಿಸಿ ಶಾಪ್ ಎಸ್ಟಾಬ್ಲಿಷ್‍ಮೆಂಟ್ ಕಾಯ್ದೆ ಅಡಿ ನೋಂದಾಯಿಸಲಾದ ನೆರೆಹೊರೆ ಅಂಗಡಿಗಳು, ಒಂಟಿ ಅಂಗಡಿಗಳನ್ನು ಮತ್ತು ವಸತಿ ಸಮುಚ್ಛಯದಲ್ಲಿರುವ ಅಂಗಡಿಗಳನ್ನು ತೆರೆಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಈ ಅಂಗಡಿಗಳಲ್ಲಿ ಶೇ50ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುವುದು ಮತ್ತು ಸಿಬ್ಬಂದಿ ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಬಹುದಾಗಿದೆ ಹಾಗೂ ಗ್ರಾಮೀಣ ಭಾಗದಲ್ಲಿನ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಎ.28ರ ಸರಕಾರದ ಆದೇಶವನ್ನೇ ಅನುಸರಿಸುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News