ಗ್ರೀನ್ಝೋನ್ನಲ್ಲಿ ಕೆಲ ನಿರ್ಬಂಧಗಳೊಂದಿಗೆ ಲಾಕ್ಡೌನ್ ಸಡಿಲ: ಚಿಕ್ಕಮಗಳೂರು ಡಿಸಿ
ಚಿಕ್ಕಮಗಳೂರು, ಮೇ 3: ಕೇಂದ್ರ ಮತ್ತು ರಾಜ್ಯ ಸರಕಾರ ಕೋವಿಡ್-19 ನಿಯಂತ್ರಿಸಲು ಮೇ 4ರಿಂದ ಮೇ.17ರ ವರೆಗೆ ಮೂರನೇ ಹಂತದ ಲಾಕ್ಡೌನ್ ವಿಸ್ತರಿಸಿದೆ. ಆದರೆ ಹಸಿರು ವಲಯದ ಜಿಲ್ಲೆಗಳಿಗೆ ಈ ಲಾಕ್ಡೌನ್ ವಿಸ್ತರಣೆಯಲ್ಲಿ ಕೆಲ ನಿರ್ಬಂಧಗಳನ್ನು ವಿಧಿಸಿ ಸಡಿಲಿಕೆ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಪ್ರವಾಸಿಗರು, ವಿದ್ಯಾರ್ಥಿಗಳು, ವಲಸೆ ಕಾರ್ಮಿಕರನ್ನು ಅವರವರ ರಾಜ್ಯ ಹಾಗೂ ಜಿಲ್ಲೆಗಳಿಗೆ ಕಳಿಸಲು ಮತ್ತು ನಮ್ಮ ಜಿಲ್ಲೆಗೆ ಬರುವವರನ್ನು ಕರೆಸಿಕೊಳ್ಳಲು ನೂತನ ಸೇವಾ ಸಿಂಧೂ ಆಪ್ನ್ನು ಸಕ್ರೀಯಗೊಳಿಸಲಾಗಿದೆ. ಅಗತ್ಯವಿರುವವರು ಸೇವಾ ಸಿಂಧೂ sevasindukaranataka.gov ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಗ್ರಾಪಂ ಕಚೇರಿ, ತಾಪಂ ಕಚೇರಿ, ಎಸಿ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೇವಾ ಸಿಂಧೂ ಕೌಂಟರ್ ಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ಜಿಲ್ಲೆ ಪ್ರವೇಶಿಸುವರನ್ನು ಸ್ಕ್ರೀನಿಂಗ್ಗೆ ಒಳಪಡಿಸಿ ಸೋಂಕಿನ ಲಕ್ಷಣಗಳು ಕಂಡು ಬಂದರೆ ಕ್ವಾರಂಟೈನ್ಗೆ ಒಳಪಡಿಸಲಾಗುವುದು. ಜಿಲ್ಲೆಯ ಗಡಿಯೊಳಗೆ ವಾಹನ ಸಂಚರಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಅಂತರ ಜಿಲ್ಲಾ ವಾಹನ ಮತ್ತು ಜನರ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಸಾವು, ಮದುವೆ, ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಿತ್ತಳೆ ಮತ್ತು ಕೆಂಪು ವಲಯಕ್ಕೆ ಸಂಚರಿಸಲು ಅನುಮತಿ ನೀಡಲಾಗುವುದು ಎಂದರು.
ಶಾಲಾ ಕಾಲೇಜುಗಳು, ಶೈಕ್ಷಣಿಕ ಕೇಂದ್ರಗಳನ್ನು ಮುಂದಿನ ಆದೇಶದವರೆಗೂ ತೆರೆಯುವಂತಿಲ್ಲ. ಆನ್ಲೈನ್ ಮೂಲಕ ಪಾಠ ಪ್ರವಚನಗಳನ್ನು ನಡೆಸಲು ಅವಕಾಶ ನೀಡಲಾಗಿದೆ ಎಂದ ಅವರು, ಲಾಡ್ಜ್, ರೆಸಾಲ್ಟ್, ವ್ಯಾಯಾಮ ಕೇಂದ್ರ, ಬಾರ್ ಆ್ಯಂಡ್ ರೆಸ್ಟೋರೆಂಟ್, ಚಿತ್ರಮಂದಿರ, ಸಮುದಾಯ ಭವನ, ಶಾಪಿಂಗ್ ಮಾಲ್, ಮನರಂಜನ ಕೇಂದ್ರಗಳನ್ನು ತೆರೆಯುವಂತಿಲ್ಲ. ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಆಧ್ಯಾತ್ಮಿಕ ಕಾರ್ಯಕ್ರಮ, ಉಪನ್ಯಾಸ, ಕ್ರೀಡಾ ಚಟುವಟಿಕೆಗಳಿಗೆ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು.
ಮೂರನೇ ಹಂತದ ಲಾಕ್ಡೌನ್ ಅವಧಿಯಲ್ಲಿ ಎರಡು ವಾರಗಳ ಕಾಲ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಸಾರ್ವಜನಿಕರು ವಿನಾಕಾರಣ ಮನೆಯಿಂದ ಹೊರಬರುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಸಂಜೆ 7ರಿಂದ ಬೆಳಗ್ಗೆ 7ಗಂಟೆಯ ವರೆಗೂ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದ ಅವರು, ಜನರ ಆರೋಗ್ಯ ಭದ್ರತಾ ದೃಷ್ಟಿಯಿಂದ 10ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆ ಉಳ್ಳವರು ಅಗತ್ಯ ಸೇವೆ ಹೊರತುಪಡಿಸಿ ಮನೆಯಿಂದ ಹೊರಬರದಂತೆ ನಿರ್ಬಂಧಿಸಲಾಗಿದೆ ಎಂದರು.
ಹಸಿರು ವಲಯ ವ್ಯಾಪ್ತಿಯಲ್ಲಿ ಇರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಷರತ್ತು ವಿಧಿಸಿ ಅವಕಾಶ ಕಲ್ಪಿಸಲಾಗಿದೆ. ಬಸ್ ಸಂಚಾರದ ವೇಳೆ ಶೇ.50ರಷ್ಟು ಪ್ರಯಾಣಿಕರು ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಮನೆಯಿಂದ ಹೊರಬರುವ, ಬಸ್ಗಳಲ್ಲಿ ಪ್ರಯಾಣಿಸುವವರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ, ಸ್ಯಾನಿಟೈಸ್ ಮಾಡಿಕೊಳ್ಳುವುದು ಕಡ್ಡಾಯ ಎಂದವರು ಹೇಳಿದರು.
ಮದುವೆ ಕಾರ್ಯಕ್ರಮಗಳಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಂಡು 50 ಮಂದಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೆ 20 ಮಂದಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಧೂಮಪಾನ, ತಂಬಾಕು ಉತ್ಪನ್ನ ಬಳಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಯಾವುದೇ ನಿಷೇದವಿಲ್ಲ ಎಂದು ತಿಳಿಸಿ ಜಿಲ್ಲಧಿಕಾರಿ ಪಾನ್ಶಾಪ್, ಮದ್ಯದಂಗಡಿ, ತಂಬಾಕು ಮಾರಾಟ ಕೇಂದ್ರಗಳಲ್ಲಿ 5 ಜನರಿಗಿಂತ ಹೆಚ್ಚಿನ ಜನ ಸೇರುವಂತಿಲ್ಲ, ಈ ಸ್ಥಳಗಳಲ್ಲಿ ಪರಸ್ಪರ ಐದು ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದರು.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತಾ, ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಉಪಸ್ಥಿತರಿದ್ದರು.