ಬಾಗಲಕೋಟೆ: ಒಂದೇ ಗ್ರಾಮದ 12 ಮಂದಿಗೆ ಕೊರೋನ ಸೋಂಕು ದೃಢ

Update: 2020-05-06 14:39 GMT
ಸಾಂದರ್ಭಿಕ ಚಿತ್ರ

ಬಾಗಲಕೋಟೆ, ಮೇ 6: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರು ಗ್ರಾಮದಲ್ಲಿ 10 ವರ್ಷದ ಬಾಲಕ ಸೇರಿ 12 ಜನರಿಗೆ ಬುಧವಾರ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ.

ಬಾದಾಮಿ ಪಟ್ಟಣದ ಚಾಲುಕ್ಯ ನಗರದ ಚಿಕ್ಕಪ್ಪನ ಮನೆಗೆ ಉಡುಪಿಯಿಂದ ಮರಳಿದ್ದ 18 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಸೋಂಕು ತಗಲಿದೆ. ಆಕೆ ಶೀತ-ಜ್ವರದಿಂದ ಬಳಲುತ್ತಿದ್ದಳು. ಚಿಕಿತ್ಸೆಗೆ ಆಸ್ಪತ್ರೆಗೆ ಬಂದಾಗ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ಢಾಣಕಶಿರೂರಿನ 21 ವರ್ಷದ ಗರ್ಭಿಣಿ(ರೋಗಿ ಸಂಖ್ಯೆ 607) ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಗೆ ತಪಾಸಣೆಗೆ ತೆರಳಿದ್ದಾಗ ಸೋಂಕು ಪತ್ತೆಯಾಗಿತ್ತು. ಈಗ ಆಕೆ ಸೇರಿ ಆಕೆಯ ಸಂಪರ್ಕಕ್ಕೆ ಬಂದ ಅಕ್ಕಪಕ್ಕದ ಮನೆಯ 12 ಮಂದಿಗೆ ಸೋಂಕು ದೃಢಪಟ್ಟಿದೆ. ಗರ್ಭಿಣಿಯ ಕುಟುಂಬದ 9 ಮಂದಿಗೆ ನೆಗೆಟಿವ್ ಬಂದಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ಗರ್ಭಿಣಿಗೆ ಸೀಮಂತ ಕಾರ್ಯ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಂಬಂಧಿಗಳು ಪಾಲ್ಗೊಂಡಿದ್ದರು. ಹೀಗಾಗಿ, ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಗರ್ಭಿಣಿಗೆ ಸೋಂಕು ತಗುಲಿರುವ ಮೂಲ ಇನ್ನೂ ಗೊತ್ತಾಗಿಲ್ಲ. ಸೀಮಂತ ಕಾರ್ಯಕ್ಕೆ ಬಂದವರಿಂದಲೂ ಸೋಂಕು ತಗುಲಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಹೀಗಾಗಿ, ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ಪತ್ತೆ ಮಾಡಿ ಅವರನ್ನು ತಪಾಸಣೆಗೊಳಪಡಿಸುವ ಜೊತೆಗೆ ಆ ಕುಟುಂಬದವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ. ಇಡೀ ಗ್ರಾಮವನ್ನೇ ಸೀಲ್‍ಡೌನ್ ಮಾಡಲಾಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಇವರಲ್ಲಿ 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ 17 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News