ಹುಬ್ಬಳ್ಳಿ: ಕೊರೋನ ವೈರಸ್ ಸೋಂಕಿತ ಗರ್ಭಿಣಿ ಮಹಿಳೆಯ ಜೀವ ಉಳಿಸಲು ಗರ್ಭಪಾತ
ಹುಬ್ಬಳ್ಳಿ, ಮೇ 8: ಕೊರೋನ ವೈರಸ್ ಸೋಂಕಿತ ಗರ್ಭಿಣಿಯ ಜೀವ ಉಳಿಸಲು ವೈದ್ಯರು ಆಕೆಗೆ ಮಾತ್ರೆ ನೀಡಿ ಗರ್ಭಪಾತ ಮಾಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ಸದ್ಯ ಮಹಿಳೆಯ ಆರೋಗ್ಯ ಸ್ಥಿರವಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ 23 ವರ್ಷದ ಮಹಿಳೆ ಕೊರೋನ ವೈರಸ್ ಭೀತಿಯಿಂದ ಮಾನಸಿಕವಾಗಿ ನೊಂದಿದ್ದರು. ಅಲ್ಲದೇ ಮಹಿಳೆಯ ದೇಹದಲ್ಲಿ ಸೋಡಿಯಮ್ ಅಂಶ ಕೂಡ ಕಡಿಮೆಯಾಗಿ ಸುಸ್ತಾಗಿದ್ದು, ಅಲ್ಸರ್ ಉಂಟಾಗಿ ಊಟ ಮಾಡಲು ಆಗುತ್ತಿರಲಿಲ್ಲ. ಜೊತೆಗೆ ಹಿಮೋಗ್ಲೋಬಿನ್ ಕಡಿಮೆಯಾಗಿ ರಕ್ತ ನೀಡಲಾಗಿತ್ತು. ಹೀಗಾಗಿ ಮಹಿಳೆ ಉಳಿಸಿಕೊಳ್ಳಲು ಗರ್ಭಪಾತ ಅನಿವಾರ್ಯವಾಗಿದ್ದರಿಂದ ವೈದ್ಯರು ಗರ್ಭಪಾತ ಮಾಡಿ ಮಹಿಳೆಯ ಜೀವ ಉಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಕೊರೋನ ಸೋಂಕಿತ ಮಹಿಳೆಗೆ ಗರ್ಭಪಾತ ಮಾಡುವುದಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಅಲ್ಲದೇ ಮಹಿಳೆಯ ಕುಟುಂಬಕ್ಕೆ ಅಗತ್ಯತೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮಾತ್ರೆಗಳನ್ನು ನೀಡುವ ಮೂಲಕ ಗರ್ಭಪಾತ ಮಾಡಲಾಗಿದೆ. ಮಹಿಳೆಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ ಗರ್ಭಿಣಿ ಕೊರೋನ ವೈರಸ್ ಸೋಂಕು ದೃಢಪಟ್ಟು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ, ಕೊರೋನ ವೈರಸ್ ದೃಢಪಟ್ಟಿರುವ ಗರ್ಭಿಣಿಯ ಪತಿ ಸೇರಿದಂತೆ ಕುಟುಂಬದವರೆಲ್ಲ ಸರಕಾರಿ ಕ್ವಾರಂಟೈನ್ನಲ್ಲಿದ್ದಾರೆ.