ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್

Update: 2020-05-10 15:05 GMT

ತುಮಕೂರು, ಮೇ.10: ಕೊರೋನ ವೈರಸ್‍ನಿಂದ ಲಾಕ್‍ಡೌನ್ ಆಗಿರುವ ಹಿನ್ನಲೆಯಲ್ಲಿ ಕಳೆದ 45 ದಿನಗಳಿಂದಲೂ ನಗರದಲ್ಲಿ ನಿರಂತರವಾಗಿ ಆಹಾರ ವಿತರಣೆ ಸೇರಿದಂತೆ ಅಗತ್ಯ ದಿನಬಳಕೆ ವಸ್ತುಗಳನ್ನು ವಿತರಿಸುತ್ತಿರುವ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಅವರು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತರಕಾರಿಗಳನ್ನು ಸಹ ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ನಗರದ ಸೀಲ್‍ಡೌನ್ ಪ್ರದೇಶವಾಗಿರುವ 10ನೇ ವಾರ್ಡಿನ ಪಿ.ಹೆಚ್.ಕಾಲನಿಯ ಸುಮಾರು 400 ಕುಟುಂಬಗಳಿಗೆ ಇಂದು ವಿವಿಧ ರೀತಿಯ ತರಕಾರಿಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿ, ಲಾಕ್‍ಡೌನ್ ಘೋಷಣೆಯಾದಾಗಿನಿಂದಲೂ ನಿರಂತರವಾಗಿ ನಗರದ ವಿವಿಧ ಕಡೆ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು, ಭಿಕ್ಷುಕರಿಗೆ ಆಹಾರ ವಿತರಣೆ ಮಾಡುತ್ತಾ ಬಂದಿದ್ದು, ಕೊರೋನ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬೆಸ್ಕಾಂ ಸಿಬ್ಬಂದಿ, ಪೌರಕಾರ್ಮಿಕರಿಗೂ ಸಹ ಆಹಾರ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಬೆಳಗ್ಗೆ ಮತ್ತು ಸಂಜೆಯೂ ಕೂಡ ಕೆಲವು ವಾರ್ಡುಗಳಲ್ಲಿ ಪ್ರತಿನಿತ್ಯ 1,000 ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಾ ಬಂದಿದ್ದು, ಕೊರೋನ ವೈರಸ್‍ನಿಂದ ಕೆಲವು ಪ್ರದೇಶಗಳು ಸೀಲ್‍ಡೌನ್ ಆಗಿರುವ ಹಿನ್ನಲೆಯಲ್ಲಿ ತರಕಾರಿ ಮಾರುವವರು, ಹಣ್ಣು ಹಂಪಲು ಮಾರುವವರು ಯಾರೂ ಒಳಗೆ ಹೋಗುವ ಪರಿಸ್ಥಿತಿ ಇರಲಿಲ್ಲ, ಇದನ್ನು ಮನಗಂಡು ನಗರದ ಸುಮಾರು 20 ವಾರ್ಡುಗಳಲ್ಲಿ ಸಮಿತಿಯನ್ನು ರಚಿಸಿ ಆ ಸಮಿತಿಯ ಮೂಲಕ ಬಡವರಿಗೆ ಆಹಾರ ದಿನಸಿಗಳನ್ನು ಕೊಡುವ ವ್ಯವಸ್ಥೆಯನ್ನು ಮಾಡುತ್ತಿದ್ದು, ಇದುವರೆಗೂ ಸುಮಾರು 4000 ಆಹಾರದ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ರಮಝಾನ್ ಕಿಟ್: ಇದಲ್ಲದೇ ಮುಂದಿನ ವಾರದೊಳಗೆ ಇನ್ನೂ 4,000 ಕಿಟ್‍ಗಳನ್ನು ವಿತರಿಸಲು ಸಿದ್ಧತೆ ನಡೆಸಿದ್ದು, ಈಗ ರಮಝಾನ್ ಮಾಸ ಆರಂಭವಾಗಿರುವುದರಿಂದ ಈ ತಿಂಗಳ 24 ಮತ್ತು 25ಕ್ಕೆ ಹಬ್ಬ ಇರುವುದರಿಂದ ಬಡವರು, ಮನೆಯಲ್ಲೇ ಕುಳಿತು ಹಬ್ಬವನ್ನು ಆಚರಿಸಲು ರಮಝಾನ್ ಕಿಟ್ ಕೂಡ ಸಿದ್ಧಪಡಿಸಿದ್ದು, ಮುಂದಿನ ವಾರದಲ್ಲಿ ಕಿಟ್‍ಗಳನ್ನು ವಿತರಿಸಲಾಗುತ್ತಿದೆ ಎಂದರು.

ಎರಡನೇ ಬಾರಿಗೆ ಆಹಾರದ ಕಿಟ್ ವಿತರಣೆ: ಪ್ರಸ್ತುತ ಪಿ.ಎಚ್.ಕಾಲನಿ ಮತ್ತು ಕೆ.ಎಚ್.ಬಿ ಕಾಲನಿಗಳು ಸೀಲ್‍ಡೌನ್ ಆಗಿರುವುದರಿಂದ ಆ ಎರಡೂ ವಾರ್ಡುಗಳ ಬಡವರಿಗೆ ಎರಡನೇ ಭಾರಿಗೆ ಆಹಾರದ ಕಿಟ್‍ಗಳನ್ನು ನೀಡುವ ವ್ಯವಸ್ಥೆ ಮಾಡುತ್ತಿದ್ದು, ಇದರ ಜೊತೆಗೆ ತರಕಾರಿಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳು ಬಡವರಿಗೆ ಸಹಾಯ ಮಾಡುತ್ತಿದ್ದು, ಇದರ ಜೊತೆಗೆ ಸರ್ಕಾರದಿಂದಲೂ ಸಹ ಸೀಲ್‍ಡೌನ್ ಆಗಿರುವ ಪ್ರದೇಶದಲ್ಲಿ ಅಗತ್ಯ ಆಹಾರ ಪದಾರ್ಥಗಳು ಮತ್ತು ಹಾಲು, ತರಕಾರಿ, ಹಣ್ಣು ಹಂಪಲು ಕೊಡುವ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಲಾಗಿದೆ. ಈಗಾಗಲೇ ಸೊಸೈಟಿಗಳಿಂದ ಪಡಿತರ ವಿತರಿಸಲಾಗಿದೆ. ದಾನಿಗಳು ಕೆಲವು ಪದಾರ್ಥಗಳನ್ನು ಕೊಡುತ್ತಿದ್ದಾರೆ. ಎಲ್ಲಾ ಪದಾರ್ಥಗಳನ್ನು ಸಂಗ್ರಹಿಸಿದ ಬಳಿಕ ವಿತರಣೆಗೆ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ತ್ವರಿತವಾಗಿ ನಗರದ ಬಡ ಜನತೆಗೆ ಆಹಾರ ಪದಾರ್ಥಗಳನ್ನು ಪೂರೈಸಲು ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಮನೆಯಲ್ಲೇ ಸುರಕ್ಷಿತವಾಗಿರಿ: ಕೋವಿಡ್-19 ವಿಶ್ವದಾದ್ಯಂತ ಬಹಳ ವೇಗವಾಗಿ ಹರಡುತ್ತಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಚ್ಚತೆ ಕಾಪಾಡಿಕೊಂಡು ಮನೆಯಿಂದ ಯಾರೂ ಹೊರ ಬರದಂತೆ ಮನೆಯಲ್ಲೇ ಸುರಕ್ಷಿತವಾಗಿದ್ದು, ಕೋವಿಡ್-19ನ್ನು ಆದಷ್ಟು ಬೇಗ ಓಡಿಸಲು ಸಂಕಲ್ಪ ಮಾಡಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News