ರಾಜ್ಯದ ಯಾವುದೇ ಭಾಗದಲ್ಲಿದ್ದರೂ ಪಡಿತರ ಪಡೆಯಬಹುದು: ಸಚಿವ ಗೋಪಾಲಯ್ಯ

Update: 2020-05-10 18:06 GMT

ಬೆಂಗಳೂರು, ಮೇ 10: ಪಡಿತರದಾರರು ರಾಜ್ಯದ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ಪಾಲಿನ ಪಡಿತರವನ್ನು ಪಡೆಯಲು ಅರ್ಹರಾಗಿದ್ದಾರೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

ರವಿವಾರ ಇಲ್ಲಿನ ರಾಜಗೋಪಾಲ ನಗರ ಹಾಗೂ ಚೊಕ್ಕಸಂದ್ರದಲ್ಲಿ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಹೊರಜಿಲ್ಲೆಯ ಪಡಿತರದಾರರು ನಮ್ಮ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಗೆ ಒಳಡುವುದಿಲ್ಲವೆಂದು ಕುಂಟು ನೆಪಗಳನ್ನು ಹೇಳಿ, ಪಡಿತರವನ್ನು ವಿತರಿಸದಿದ್ದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.

ಇಂದು ನಗರದ ವಿವಿಧ ಭಾಗಗಳಲ್ಲಿರುವ ಬಡವರಿಗೆ, ನಿಗರ್ತಿಕರಿಗೆ ಸುಮಾರು 6 ಸಾವಿರಕ್ಕೂ ಹೆಚ್ಚು ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು. ಲಾಕ್‍ಡೌನ್ ಮುಗಿದು ಜನಜೀವನ ಸಹಜ ಸ್ಥಿತಿಗೆ ಬರುವವರಿಗೆ ಬಡವರಿಗೆ ಆಹಾರ ಕಿಟ್‍ಗಳನ್ನು ವಿತರಿಸುವ ಕಾರ್ಯ ಮುಂದುವರೆಯಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News