ಶಿವಮೊಗ್ಗ: ರಸ್ತೆ ಅಪಘಾತಕ್ಕೆ ಯುವಕ ಬಲಿ, ಇಬ್ಬರಿಗೆ ಗಾಯ

Update: 2020-05-11 16:27 GMT

ಶಿವಮೊಗ್ಗ, ಮೇ.11: ಸಕ್ರೆಬೈಲು ಸಮೀಪ ರವಿವಾರ ಭೀಕರ ಅಪಘಾತ ಸಂಭವಿಸಿ, ಒಬ್ಬ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾದ ಘಟನೆ ನಡೆದಿದೆ. ಮಳೆಯ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದಾಗ ಅಪಘಾತ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. 

ಸಕ್ರೆಬೈಲು ಸಮೀಪ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಲಕ್ಕೆ ಜಾರಿದೆ. ಎದುರಿನಿಂದ ಬರುತ್ತಿದ್ದ ಬೈಕ್‍ಗೆ ಲಾರಿಯ ಹಿಂಭಾಗ ಅಪ್ಪಳಿಸಿದೆ. ಬಳಿಕ ಬೈಕ್‍ನ ಹಿಂದೆ ಬರುತ್ತಿದ್ದ ಕಾರಿಗೂ ಲಾರಿ ಗುದ್ದಿದೆ. ಇದರಿಂದ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ.

ಬೈಕ್‍ನಲ್ಲಿ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದರು. ಈ ಪೈಕಿ ಶಿವಮೊಗ್ಗದ ಜನಾರ್ದನ್ (19) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬ ಬೈಕ್ ಸವಾರ ರಫೀಕ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ಇನ್ನು, ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಈ ಪೈಕಿ ಪ್ರತೀಕ್ಷಾ (19) ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ.
ಕಾರಿನಲ್ಲಿ ಬರುತ್ತಿದ್ದ ಯುವತಿಯೊಬ್ಬರು ಮಳೆಯ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಇದು ಕೂಡ ಮೊಬೈಲ್‍ನಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗಿದೆ. ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News