ಶಿವಮೊಗ್ಗ: ಮಾತು ಬಾರದ ವಯೋವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ

Update: 2020-05-12 10:07 GMT

ಶಿವಮೊಗ್ಗ : ಮಾತು ಬಾರದ ವಯೋವೃದ್ಧರೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಸ್ತೆ ಅಪಘಾತ ನಡೆಸಿ, ಅವರ ಮೇಲೆ ಕಾರು ಚಾಲಕ ಹಾಗೂ ಸವಾರರು ಹಲ್ಲೆ ನಡೆಸಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ನೆಲ್ಲಿಸರ ಗ್ರಾಮದಲ್ಲಿ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಮಾಳೂರು ಠಾಣೆ ವ್ಯಾಪ್ತಿಯ ನೆಲ್ಲಿಸರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಾತು ಬಾರದ ವಯೋವೃದ್ಧರಿಗೆ ಗಾಯಗಳಾಗಿದ್ದು, ಮೈಯಿಂದ ರಕ್ತ ಸುರಿಯುತ್ತಿದ್ದರೂ ಅವರು ಹಾಗೆಯೇ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ವ್ಯಕ್ತಿಯೊಬ್ಬರು ಸಕ್ರೆಬೈಲ್ ಅರಣ್ಯ ಪ್ರದೇಶದಲ್ಲಿ ಅವರನ್ನು ರಕ್ಷಣೆ ಮಾಡಿದ್ದಾರೆ. ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಇವರನ್ನು ನೋಡಿ ವಿಚಾರಿಸಿದ್ದಾರೆ. ಜೊತೆಗೆ ಅವರ ಆರೈಕೆಗೆ ಮುಂದಾಗಿದ್ದಾರೆ. ತಮ್ಮ ಬೈಕ್‌ನಲ್ಲೇ  ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಧ್ಯ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ ಸಂಬಂಧ ಕಾರು ಚಾಲಕ ಮತ್ತು ಸವಾರರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಶಾಂತಿ ಸೃಷ್ಟಿಸಿದರೆ ಕ್ರಮ:ಎಸ್‌ಪಿ

ಮಾತು ಬಾರದ ವಯೋ ವೃದ್ಧರ ಮೇಲೆ ಹಲ್ಲೆ ನಡೆಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ  ಕೋಮು ಬಣ್ಣ ಕಟ್ಟವ ಪ್ರಯತ್ನ ನಡೆಯುತ್ತಿದೆ. ಆ ರೀತಿಯ ದ್ವೇಷ ಭಾವನೆ ಸೃಷ್ಟಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News