ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ.ನೆರವು ಆರ್ಥಿಕ ವರದಾನ: ಯಡಿಯೂರಪ್ಪ

Update: 2020-05-13 15:46 GMT

ಬೆಂಗಳೂರು, ಮೇ 13: ಕೊರೋನ ಸಂಕಷ್ಟದ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಪುನಶ್ಚೇತನಕ್ಕೆ ಕೇಂದ್ರ ಸರಕಾರ 3ಲಕ್ಷ ಕೋಟಿ ರೂ.ನೆರವು ಘೋಷಣೆ ಮಾಡಿರುವುದು ಕೇವಲ ಆರ್ಥಿಕ ಸಹಾಯವಾಗಿರದೆ, ದೇಶದ ಉದ್ಯಮಿಗಳು ಮತ್ತು ಕಾರ್ಮಿಕ ವರ್ಗಕ್ಕೆ ಆರ್ಥಿಕವಾಗಿ ವರದಾನವಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಬುಧವಾರ ಪ್ರಧಾನಿ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಸಿಎಂ ಯಡಿಯೂರಪ್ಪ, ನಿನ್ನೆ ಪ್ರಧಾನಿ ಮೋದಿ ಆರ್ಥಿಕ ಪುನಶ್ಚೇತನಕ್ಕೆ 20ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದು, ಇದಕ್ಕೆ ಅನುಗುಣವಾಗಿ ವಿತ್ತ ಸಚಿವರು 3ಲಕ್ಷ ಕೋಟಿ ರೂ. ಹಣಕಾಸು ನೆರವನ್ನು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಹಾಯ ಹಸ್ತ ಚಾಚಿದ್ದು ಶಾಘನೀಯ ಎಂದು ಬಣ್ಣಿಸಿದ್ದಾರೆ.

ಆರ್ಥಿಕ ಪುನಶ್ಚೇತನ ಸಮಯೋಚಿತ ಮತ್ತು ವೈಜ್ಞಾನಿಕವಾಗಿದ್ದು, ಬಹಳ ಆರ್ಥಿಕ ನೈಪುಣ್ಯತೆಯಿಂದ ಕೂಡಿದೆ. ಎಂಎಸ್‍ಎಂಇಗಳಿಗೆ ಯಾವುದೆ ಭದ್ರತೆ ಇಲ್ಲದೆ ಸಾಲ ಯೋಜನೆ ಘೋಷಣೆ ತಕ್ಷಣ ಕೈಗಾರಿಕೆ ಪುನರಾರಂಭಿಸಲು ಉತ್ತೇಜನಕಾರಿ. ದೇಶದ 45 ಲಕ್ಷ ಎಂಎಸ್‍ಎಂಇಗಳಿಗೆ ಲಾಭವಾಗಲಿದೆ. ಇದರ ಜೊತೆಗೆ ರಾಜ್ಯದ ವಿದ್ಯುತ್ ಕಂಪೆನಿಗಳಿಗೆ 90 ಸಾವಿರ ಕೋಟಿ ರೂ.ಧನ ಸಹಾಯ, 50 ಸಾವಿರ ಕೋಟಿ ರೂ.ಆದಾಯ ತೆರಿಗೆ ಬಾಕಿ ವಾಪಸ್ ಮತ್ತು ತೆರಿಗೆ ವಿನಾಯಿತಿ, 6750 ಕೋಟಿ ರೂ. ನೌಕರದಾರರ ಭವಿಷ್ಯನಿಧಿ ವಂತಿಗೆ ಪಾವತಿ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 30 ಸಾವಿರ ಕೋಟಿ ರೂ.ಹಣಕಾಸು ಸಹಾಯ ಕೋವಿಡ್‍ನಿಂದ ತತ್ತರಿಸಿದ ಔದ್ಯೋಗಿಕ ವಲಯಕ್ಕೆ ಸಂಜೀವಿನಿಯಾಗಿ ಪರಿಣಮಿಸಿದೆ.

200 ಕೋಟಿ ರೂ. ವರೆಗಿನ ಟೆಂಡರ್ ಪ್ರಕ್ರಿಯೆಯಲ್ಲಿ ಭಾರತೀಯ ಕಂಪೆನಿಗಳಿಗೆ ಮತ್ತು ಗುತ್ತಿಗೆದಾರರಿಗೆ ಮಾತ್ರ ಭಾಗವಹಿಸಲು ಅನುವು ಮಾಡಿಕೊಟ್ಟಿದ್ದು, ಸ್ವದೇಶಿ ಕಂಪೆನಿಗಳು ಬೆಳೆಯುವಲ್ಲಿ ದೊಡ್ಡ ಪ್ರೇರಕ ಯೋಜನೆಯಾಗಲಿದೆ. ಕೋವಿಡ್‍ನಿಂದ ತತ್ತರಿಸಿದ ಜಗತ್ತಿನ ಯಾವುದೇ ದೇಶ ಔದ್ಯೋಗಿಕ ವಲಯಕ್ಕೆ ಇಂತಹ ಆರ್ಥಿಕ ಪುನಶ್ಚೇತನ ಕಾರ್ಯಕ್ರಮವನ್ನು ಘೋಷಿಸಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಲಾಕ್‍ಡೌನ್ ವ್ಯವಸ್ಥೆಯಿಂದ ಹೊರಬಂದು ಜನತೆ ತಮ್ಮ ದಿನನಿತ್ಯದ ದುಡಿಮೆಯನ್ನು ಪ್ರಾರಂಭಿಸಲು ಪ್ರೇರೆಪಿಸಿದ ಮೊದಲ ದಿಟ್ಟಹೆಜ್ಜೆ ಇದಾಗಿದೆ ಎಂದು ಯಡಿಯೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News