ಓ ಮೆಣಸೇ...

Update: 2020-05-17 17:28 GMT

  ಕೊರೋನ ಹೋರಾಟದಲ್ಲಿ ಕೊನೆಯ ಗೆಲುವು ಮನುಕುಲದ್ದಾಗಬೇಕು
 - ರಮೇಶ್ ಜಾರಕಿಹೊಳಿ, ಸಚಿವ
 ಮನುಕುಲದೊಳಗೆ ವಲಸೆ ಕಾರ್ಮಿಕರು ಬರುತ್ತಾರೆಯೇ?


 ವಿದೇಶಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ತರಿಸಿಕೊಳ್ಳಲು ನಾವೇನು ಪ್ರಪಂಚದಾದ್ಯಂತ ದಂಡಯಾತ್ರೆ ಕೈಗೊಳ್ಳುತ್ತಿಲ್ಲ
 - ಜ.ಬಿಪಿನ್ ರಾವತ್, ರಕ್ಷಣಾ ಪಡೆಗಳ ಮುಖ್ಯಸ್ಥ

ದೇಶದ ಜನರ ವಿರುದ್ಧ ಬಳಸಲು ಅಗತ್ಯ ಬೀಳಬಹುದು.


ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಸರಕಾರ ಜನರ ಕಿವಿಗೆ ಹೂಮುಡಿಸುವ, ಟೋಪಿ ಹಾಕುವ ಕೆಲಸ ಮಾಡುತ್ತಿದೆ
 - ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಟೋಪಿ ಮತ್ತು ಹೂವುಗಳ ಹೆಸರಿನಲ್ಲಿ ಹೆಚ್ಚುವರಿ ತೆರಿಗೆ ಸಂಗ್ರಹಿಸುವ ಉದ್ದೇಶವಿದೆಯಂತೆ.


ಚೆಂಡಿನ ಹೊಳಪು ಉಳಿಸಿಕೊಳ್ಳಲು ಎಂಜಲು, ಬೆವರಿನ ಬಳಕೆಯನ್ನು ನಿಷೇಧಿಸಿದರೆ ಟೆಸ್ಟ್ ಕ್ರಿಕೆಟ್ ಮಾದರಿಯು ಸೊರಗುವುದು ಖಚಿತ - ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯ ಬೌಲರ್
ಕ್ರಿಕೆಟ್‌ನ್ನು ನಿಷೇಧಿಸಿದರೆ ಚೆಂಡಿನ ಹೊಳಪನ್ನು ಉಳಿಸಿಕೊಳ್ಳಬಹುದಲ್ಲವೇ?


ಮದ್ಯದಂಗಡಿ ತೆರೆದರೆ ಮತ್ತೆ ಎಐಎಡಿಎಂಕೆ ಸರಕಾರ ಅಧಿಕಾರಕ್ಕೆ ಬರುವುದಿಲ್ಲ - ರಜನಿಕಾಂತ್, ನಟ

ಮುಚ್ಚಿದರೆ ಅಧಿಕಾರಕ್ಕೆ ಬಂದ ಸರಕಾರ ಉಳಿಯುವುದಿಲ್ಲವಂತೆ.


ಕಾರ್ಮಿಕ ಹಕ್ಕುಗಳ ದಮನಕ್ಕೆ ಕೊರೋನ ನೆಪವಾಗಬಾರದು - ರಾಹುಲ್‌ಗಾಂಧಿ, ಕಾಂಗ್ರೆಸ್ ನಾಯಕ
ಬೇರೆ ಯಾವ ನೆಪವಾದರೂ ನಡೆಯುತ್ತದೆ ಎಂದಾಯಿತು.


ಮದ್ಯಕ್ಕೆ ಅಧಿಕ ದರ ವಸೂಲು ಮಾಡಿದ ದೂರು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು - ಕೋಟ ಶ್ರೀನಿವಾಸ ಪೂಜಾರಿ, ಸಚಿವ

  ದೂರು ನೀಡಿದವರ ವಿರುದ್ಧ ಇರಬಹುದೇ? 


ರಾಜ್ಯ ಸರಕಾರಕ್ಕೆ ಅರ್ಚಕರ ಶಾಪ ತಟ್ಟಿದೆ - ಎಚ್.ಡಿ.ರೇವಣ್ಣ, ಮಾಜಿ ಸಚಿವ

ವಲಸೆ ಕಾರ್ಮಿಕರ ಶಾಪ ಅರ್ಚಕರಿಗೆ ತಟ್ಟಿರುವ ಸಾಧ್ಯತೆಗಳಿವೆ.


ಮದ್ಯ ಮಾರಾಟ ನಿಷೇಧಕ್ಕೆ ಇದು ಸಕಾಲ - ರಾಜುಗೌಡ, ಶಾಸಕ

ಮದ್ಯ ಮಾರಾಟಕ್ಕೆ ಇದು ಸಕಾಲ ಎಂದು ಸರಕಾರ ಭಾವಿಸಿದೆ.


ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಕೊರೋನ ವೈರಸ್ ಮೇಲೆ ದ್ವೇಷವೇ ಹೊರತು, ಬೇರೆ ಯಾರ ಮೇಲೂ ಅಲ್ಲ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಕೊರೋನಾ ವೈರಸ್ ಬರುವ ಮೊದಲು ನಮ್ಮ ನಡುವೆ ದ್ವೇಷ ಇರಲಿಲ್ಲವೇ?


ಕೊರೋನ ವೈರಸ್ ಸುದೀರ್ಘ ಕಾಲ ನಮ್ಮ ಬದುಕಿನ ಭಾಗವಾಗಿರಲಿದೆ - ನರೇಂದ್ರ ಮೋದಿ, ಪ್ರಧಾನಿ
 ಅದನ್ನು ಹೆಮ್ಮೆಯಿಂದ ಹೇಳುತ್ತಿದ್ದೀರಿ ಯಾಕೆ?


2020ಕ್ಕೆ 20ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಅದ್ಭುತ - ಬಿ.ಎಲ್.ಸಂತೋಷ್, ಬಿಜೆಪಿ ರಾ.ಪ್ರ.ಕಾರ್ಯದರ್ಶಿ
ಹೌದು, ಹಣವೇ ಇಲ್ಲವೆನ್ನುವುದು ವಿಶ್ವಕ್ಕೇ ಗೊತ್ತಿದ್ದರೂ ಪ್ಯಾಕೇಜ್ ಘೋಷಣೆ ಮಾಡುವುದು ಅದ್ಭುತವಲ್ಲದೆ ಇನ್ನೇನು?


ಕನ್ನಡದ ಕೆಲಸವನ್ನು ಮಾಡಲು ಸರಕಾರ ಅನುದಾನ ನೀಡದಿದ್ದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದು ಮಾಡುವುದು ಒಳ್ಳೆಯದು - ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಅನುದಾನ ನೀಡುವುದಕ್ಕಾಗಿಯೇ ಬಾರ್‌ಗಳನ್ನು ತೆರೆಸಲಾಗಿದೆಯಂತೆ, ಸ್ವಲ್ಪ ಕಾಯಿರಿ.


ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಿದರೆ ಕ್ರಿಮಿನಲ್ ಕೇಸು ದಾಖಲು ಮಾಡಲಾಗುವುದು -ಶ್ರೀರಾಮುಲು, ಸಚಿವ
ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುವುದಕ್ಕಾಗಿಯೇ ಖಾಸಗಿ ಆಸ್ಪತ್ರೆಗಳನ್ನು ತೆರೆಯಲಾಗಿದೆಯಂತೆ. 


ಸದ್ಯದ ಪರಿಸ್ಥಿತಿಯಲ್ಲಿ ಯಾರೂ ಪ್ರವಾಸಕ್ಕೆ ಹೊರಡುವ ಮನಸ್ಥಿತಿಯಲ್ಲಿ ಇಲ್ಲ - ಸಿ.ಟಿ.ರವಿ, ಸಚಿವ

ಮನೆ ಕಡೆಗೆ ಹೊರಟಿರುವ ವಲಸೆ ಕಾರ್ಮಿಕರ ಕಡೆಗೊಮ್ಮೆ ನೋಡಿ.


ಸಿದ್ದರಾಮಯ್ಯ, ಡಿಕೆಶಿ ಮತ್ತು ಕುಮಾರಸ್ವಾಮಿಯವರಿಗೆ ಈಗ ಮಾಡಲು ಬೇರೆ ಕೆಲಸ ಇಲ್ಲ, ಹಾಗಾಗಿ ಸರಕಾರವನ್ನು ಟೀಕಿಸುತ್ತಿದ್ದಾರೆ - ಜಗದೀಶ್ ಶೆಟ್ಟರ್, ಸಚಿವ
ಟೀಕಿಸುವುದು ವಿರೋಧಪಕ್ಷದ ಕೆಲಸವೇ ಅಲ್ಲವೇ?


ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಚಿವರು, ಸರಕಾರಿ ಅಧಿಕಾರಿಗಳು ಮತ್ತು ನೌಕರರು ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು - ಎಚ್.ವಿಶ್ವನಾಥ್, ಮಾಜಿ ಸಚಿವ

ಅನರ್ಹ ಶಾಸಕರಿಗಾಗಿ ವೆಚ್ಚ ಮಾಡುವ ಹಣವನ್ನು ಕಡಿತಗೊಳಿಸಿದರೆ ತುಂಬಾ ಉಳಿತಾಯವಾದೀತು.


ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಿಂದ ಭಾರೀ ಉತ್ತೇಜನ ದೊರೆಯಲಿದೆ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಆ ಕೈಗಾರಿಕೆಗಳು ಎಲ್ಲಿವೆ ಎನ್ನುವುದನ್ನು ಮೊದಲು ವಿವರಿಸಿ.


ಕಾನೂನು ಬದ್ಧವಾದ ನಮ್ಮ ಮದ್ಯ ವ್ಯವಹಾರದ ಮೇಲೆ ಯಾಕೆ ಎಲ್ಲರ ಕಣ್ಣು? -ಗೋವಿಂದ ರಾಜ ಹೆಗ್ಡೆ, ಪ್ರ.ಕಾ. ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ

ಕಾನೂನು ಬದ್ಧವಾದುದೆಲ್ಲವೂ ನ್ಯಾಯಕ್ಕೆ ಬದ್ಧವಾಗಿರುವುದಿಲ್ಲ.


ಭಾರತದ ಜೈಲುಗಳಲ್ಲಿ ಇಲಿಗಳಿವೆ. ನನ್ನನ್ನು ಗಡಿಪಾರು ಮಾಡಬೇಡಿ - ನೀರವ್ ಮೋದಿ, ಉದ್ಯಮಿ

ಹೀಗೆಂದು ಹೆಗ್ಗಣದ ಮನವಿ.


ಹಸಿರು ಶಾಲು ಹಾಕಿಸಿಕೊಂಡು ಪ್ರಮಾಣವಚನ ಸ್ವೀಕರಿಸಿರುವ ನಾನು ರೈತರ ಹಿತಕ್ಕೆ ಧಕ್ಕೆಯಾದರೆ ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿರುವುದಿಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ
ಹಸಿರು ಶಾಲಿನ ಬದಲು ಬೇರೆ ಬಣ್ಣದ ಶಾಲನ್ನು ಹಾಕಿ ಹೊಸದಾಗಿ ಪ್ರಮಾಣವಚನ ಮಾಡಿದರೆ ಆಯಿತು 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...