ಸರಕಾರಿ ನಿರ್ದೇಶನ, ನಿಯಮದಂತೆ ರಮಝಾನ್ ಆಚರಿಸಿ: ಸಚಿವ ಸಿ.ಟಿ. ರವಿ

Update: 2020-05-18 12:04 GMT

ಚಿಕ್ಕಮಗಳೂರು, ಮೇ18: ಕೊರೋನ ಸೋಂಕು ದೇಶವ್ಯಾಪಿ ಹರಡುತ್ತಿರುವ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುವ ನಿಯಮ ಹಾಗೂ ನಿರ್ದೇಶನಗಳನ್ನು ಪಾಲಿಸುವ ಮೂಲಕ ರಮಝಾನ್ ಮಾಸಾಚರಣೆಯನ್ನು ಆಚರಿಸಿ ಸಹಕಾರ ನೀಡಬೇಕೆಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಕರೆ ನೀಡಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಮಝಾನ್ ಮಾಸಾಚರಣೆ ಆಚರಿಸುವ ಕುರಿತು ಜಿಲ್ಲೆಯ ವಿವಿಧ ತಾಲೂಕುಗಳ ಮುಸ್ಲಿಂ ಸಮುದಾಯದ ಮುಖಂಡರುಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಮಝಾನ್ ಮಾಸವು ಉಪವಾಸದ ಮೂಲಕ ಆತ್ಮನಿವೇದನೆ ಮಾಡಿಕೊಳ್ಳುವ ಸಮಯ. ಆದರೆ ಕೊರೋನ ಸೋಂಕು ಎಲ್ಲೆಡೆ ವ್ಯಾಪಿಸಿ ಸಮುದಾಯವೊಂದರ ಸಂಭ್ರಮವನ್ನ ಕಸಿದಿದೆ. ಹಾಗಾಗಿ ಸರಕಾರಗಳು ನಮ್ಮೆಲ್ಲರ ಸುರಕ್ಷತೆಯ ದೃಷ್ಟಿಯಿಂದಾಗಿ ದೇವಾಲಯ, ಮಸೀದಿ, ಚರ್ಚುಗಳಲ್ಲಿ ಉತ್ಸವ, ಪ್ರಾರ್ಥನೆ ಮಾಡುವುದನ್ನು ನಿರ್ಬಂಧಿಸಿದೆ. ಇಲ್ಲಿ ಜನರ ನಂಬಿಕೆಗೆ ತೊಂದರೆ ಮಾಡುವ ಉದ್ದೇಶವಿಲ್ಲ. ಜಿಲ್ಲೆಯ ಎಲ್ಲಾ ಸಮುದಾಯದವರ ಸಹಕಾರದಿಂದಾಗಿ ಜಿಲ್ಲೆ ಈವರೆಗೂ ಹಸಿರು ವಲಯದಲ್ಲೇ ಉಳಿಯಲು ಸಾಧ್ಯವಾಗಿದೆ ಎಂದರು.

ಕೋರೋನ ಸೋಂಕು ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿದ್ದು, ಇತ್ತೀಚೆಗೆ ನಮ್ಮ ನೆರೆಯ ಹಾಸನ, ಶಿವಮೊಗ್ಗದಲ್ಲಿಯೂ ಕಾಣಿಸಿಕೊಂಡಿದೆ ಅದೃಷ್ಟವಶಾತ್ ನಮ್ಮ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಾರದೇ ಹಸಿರು ವಲಯದಲ್ಲೇ ಉಳಿಯುವಂತಾಗಿದೆ. ಇದಕ್ಕೆ ಎಲ್ಲಾ ಸಮುದಾಯಗಳ ಸಹಕಾರವೇ ಕಾರಣ. ಸೋಂಕಿನ ಬಗ್ಗೆ ಜನತೆ ಭಯಪಡುವುದು ಬೇಡ. ಇದರಿಂದ ಸಾವಿನ ಪ್ರಮಾಣ ಕಡಿಮೆ ಇದೆಯಾದರೂ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೇಗದ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸಾಮಾಜಿಕ ಅಂತರ, ವೈಯಕ್ತಿಕ ಸ್ವಚ್ಛತೆ ಮೂಲಕ ಇದರ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದರು.

ಈ ಬಾರಿಯ ರಮಝಾನ್ ಮಾಸಾಚರಣೆಯನ್ನು ಮುಸಲ್ಮಾನರು ಇಂದಿನ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಸ್ವಯಂ ನಿರ್ಧಾರ ಕೈಗೊಂಡು ಆಚರಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಬರುವ ಅನುಮತಿ ನಿರ್ದೇಶನದಂತೆ ರಮಝಾನ್ ಆಚರಣೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಗೆ ಅನುಮತಿ ಸಿಕ್ಕಲ್ಲಿ ಸರಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅನುಮತಿ ನೀಡದಿದ್ದಲ್ಲಿ ಮನೆಯಲ್ಲೇ ಪ್ರಾರ್ಥಿಸುವ ಮೂಲಕ ಕೊರೋನ ನಿಯಂತ್ರಣಕ್ಕೆ ಸಹಕರಿಸುವಂತೆ ಸಚಿವ ರವಿ ಮುಖಂಡರಲ್ಲಿ ವಿನಂತಿಸಿದರು.

ಜಿಲ್ಲೆಯಲ್ಲಿ ಕೊರೋನ ನಿಯಂತ್ರಣಕ್ಕಾಗಿ ಆರೋಗ್ಯಇಲಾಖೆ, ಪೊಲೀಸ್, ಹಾಗೂ ಜಿಲ್ಲಾಡಳಿತ  ನಮ್ಮೆಲ್ಲರ ಒಳಿತಿಗಾಗಿ ಜನ ಸ್ನೇಹಿಯಾಗಿ ಹಗಲಿರುಳು ಶ್ರಮಿಸಿದೆ. ಹಾಗಾಗಿ ಮುಂದೆಯೂ ಎಚ್ಚರಿಕೆ ಅವಶ್ಯಕವಿದ್ದು, ಹೊರ ರಾಜ್ಯ, ಹೊರ ಜಿಲ್ಲೆಯಿಂದ ಯಾವುದೇ ವ್ಯಕ್ತಿಗಳು ಬಂದಲ್ಲಿ ಜಿಲ್ಲಾಡಳಿತ ಅಥವಾ ಸ್ಥಳೀಯ ಆಡಳಿತದ ಗಮನಕ್ಕೆ ತಂದು ಕ್ವಾರಂಟೈನ್‍ನಲ್ಲಿಡಲು ಸಹಕರಿಸಬೇಕು. ಕೊರೋನ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸುರಕ್ಷತಾ ಸಾಧನಗಳನ್ನು ದಾಸ್ತಾನು ಇರಿಸಿಕೊಂಡಿದೆ. ಸೋಂಕು ನಿಯಂತ್ರಣಕ್ಕೆ ಮುಖ್ಯವಾಗಿ ಜನತೆಯ ಸಹಕಾರ ಅಗತ್ಯವಾಗಿದೆ ಎಂದರು. 

ಸಾರ್ವಜನಿಕ ಸ್ಥಳಗಳಲ್ಲಿ ಮದುವೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ, ಆದರೆ ಸರಕಾರಿ ನಿಯಮದಂತೆ 50 ಜನರೊಳಗೊಂಡು ಮನೆಯಲ್ಲಿಯೇ ನಡೆಸಬಹುದಾಗಿದೆ ಎಂದ ಅವರು, ಹಸಿರು ವಲಯದ ಜಿಲ್ಲೆಗಳಿಂದ ನಮ್ಮ ಜಿಲ್ಲೆಗೆ ಬರಲು ಅನುಮತಿ ಇದ್ದು, ಕೆಂಪುವಲಯದ ವ್ಯಕ್ತಿಗಳಿಗೆ ಕಡ್ಡಾಯ ತಪಾಸಣೆ ಹಾಗೂ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ವಿವಿಧ ತಾಲೂಕಿನ ಮುಸ್ಲಿಂ ಮುಖಂಡರುಗಳು ರಮಝಾನ್ ಹಬ್ಬದಲ್ಲಿ ಕನಿಷ್ಠ ಮಂದಿ ಒಳಗೊಂಡಂತೆ ಸರಕಾರಿ ನಿಯಮಗಳನ್ನು ಪಾಲಿಸಿ ಈದ್ಗಾ, ಮೊಹಲ್ಲಾಗಳಲ್ಲಿ ನಮಾಝ್ ಮಾಡಲು ಅನುಮತಿ ನೀಡಬೇಕು. ಮಾಂಸದ ಅಂಗಡಿಗಳು ತೆರೆಯಲು ಅವಕಾಶ ಕಲ್ಪಿಸಬೇಕೆಂಬ ಹಲವು ಮನವಿಗಳನ್ನು ಸಚಿವರ ಮುಂದಿಟ್ಟು ಅನುಮತಿಗೆ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಡಿವೈಎಸ್ಪಿ ಬಿ.ಎಸ್.ಅಂಗಡಿ ಹಾಗೂ ವಿವಿಧ ತಾಲ್ಲೂಕುಗಳ ಮುಸ್ಲಿಂ ಸಮುದಾಯದ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ರಮಝಾನ್ ಆಚರಣೆ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರಗಳು ಚರ್ಚೆ ನಡೆಸುತ್ತಿವೆ. ಅಂತಿಮ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಿದಾಗ ಅದರ ನಿರ್ದೇಶನದಂತೆಯೇ ಆಚರಣೆಗೆ ಅನುಮತಿ ನೀಡಲಾಗುವುದು. ಕೊರೋನ ನಿಯಂತ್ರಣಕ್ಕಾಗಿ ಸರಕಾರಗಳ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಸದ್ಯ ಈ ಸೋಂಕಿಗೆ ಯಾವುದೇ ಔಷಧಗಳು ಇಲ್ಲ. ಹೊರ ಭಾಗದಿಂದ ಯಾವುದೇ ವ್ಯಕ್ತಿಗಳು ಬಂದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಸಹಕರಿಸಬೇಕು. ರಮಝಾನ್ ಹಬ್ಬವನ್ನು ಇರುವ ವಿನಾಯಿತಿಯಂತೆಯೇ ಆಚರಿಸಬೇಕು.
-ಹರೀಶ್ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News