ಶಿವಮೊಗ್ಗ: ತಾಯಿಯ ಮೃತದೇಹದ ಜೊತೆ 5 ದಿನ ಕಳೆದ ಯುವತಿ

Update: 2020-05-19 16:23 GMT

ಶಿವಮೊಗ್ಗ, ಮೇ.19: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮನೆಯಲ್ಲಿಯೇ ಸಾವನ್ನಪ್ಪಿದ್ದು, ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಸವನಗುಡಿಯಲ್ಲಿ ನಡೆದಿದೆ. ಆದರೆ ಮಹಿಳೆ ಮೃತಪಟ್ಟಿದ್ದರೂ ಅವರ ಮಗಳು ಕಳೆದ ಐದು ದಿನಗಳಿಂದ ಮೃತದೇಹದ ಜೊತೆಗೆ ಮನೆಯೊಳಗಿದ್ದದ್ದು, ಸಾವಿನ ಕುರಿತು ಸ್ಥಳೀಯರಲ್ಲಿ ಅನುಮಾನ ಮೂಡುವಂತೆ ಮಾಡಿದೆ. 

ನಿವೃತ್ತ ಶಿಕ್ಷಕಿ ರಾಜೇಶ್ವರಿ (64) ಮೃತರು. ಇವರು ಬಸವನಗುಡಿಯ 5ನೇ ಅಡ್ಡರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರು ಮೇ 13ರಂದು ಔಷಧಿ ಸೇವಿಸಿದ್ದಾರೆ. ಓವರ್ ಡೋಸೇಜ್ ನಿಂದಲೋ ಅಥವಾ ಆರೋಗ್ಯ ಸಮಸ್ಯೆ ಉಲ್ಬಣಿಸಿಯೋ ರಾಜೇಶ್ವರಿ ಅವರು ಮನೆಯೊಳಗೆ ಮೃತಪಟ್ಟಿದ್ದಾರೆ. ಈ ವಿಚಾರ ಹೊರಗಿನವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.

ರಾಜೇಶ್ವರಿ ಅವರು ಮೃತಪಟ್ಟಾಗ ಅವರ ಮಗಳು ಮನೆಯಲ್ಲಿಯೇ ಇದ್ದರು. ಸ್ನಾತಕೋತ್ತರ ಪದಿವೀಧರೆಯಾಗಿರುವ ಇವರು, ಐದು ದಿನ ತಾಯಿಯ ಶವದೊಂದಿಗೆ ಮನೆಯೊಳಗೆ ಇದ್ದರು. ಹೊರಗೆ ಬಂದು ಯಾರಿಗೂ ವಿಚಾರ ತಿಳಿಸಿಲ್ಲ. ಇಂದು ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಮನೆ ಮಾಲಕರು ಮತ್ತು ಅಕ್ಕಪಕ್ಕದವರು ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಆಗ ರಾಜೇಶ್ವರಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ಸನಿಹದಲ್ಲೇ ಮಗಳು ಕುಳಿತಿರುವುದನ್ನು ಗಮನಿಸಿ ಆತಂಕಕ್ಕೀಡಾಗಿದ್ದಾರೆ. ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.

ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಜೇಶ್ವರಿ ಅವರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮಗಳು ಮಾನಸಿಕ ಖಿನ್ನತೆಗೆ ಒಳಗಾದಂತೆ ಕಾಣುತ್ತಿದ್ದುದರಿಂದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ತನಿಖೆಯ ಬಳಿಕವಷ್ಟೇ ಹೆಚ್ಚಿನ ವಿವರ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News