ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡುವುದು ತಪ್ಪು: ಸಚಿವ ಮಾಧುಸ್ವಾಮಿ ಹೇಳಿಕೆ ಬಗ್ಗೆ ಸಿಎಂ ಬಿಎಸ್‌ವೈ

Update: 2020-05-21 12:15 GMT

ಬೆಂಗಳೂರು, ಮೇ 21: ಸಚಿವ ಮಾಧುಸ್ವಾಮಿ ಮಹಿಳೆಯರ ಕುರಿತು ಆಡಿರುವ ಮಾತು ಸರಿಯಲ್ಲ. ಮಾಧ್ಯಮಗಳಲ್ಲಿ ಸುದ್ದಿ ಗಮನಿಸಿದ್ದೇನೆ, ನಾನು ಅವರಿಗೆ ವಾರ್ನ್ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಗೋವಿಂದರಾಜ ನಗರ ಕ್ಷೇತ್ರದ ಹೊಸಳ್ಳಿ ಬಳಿ ನೂತನವಾಗಿ ನಿರ್ಮಿಸಿರುವ ಬಿಬಿಎಂಪಿ ರೆಫರಲ್ ಆಸ್ಪತ್ರೆ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣು ಮಗಳ ಬಗ್ಗೆ ಹೀಗೆ ಮಾತಾಡೋದು ಸರಿಯಲ್ಲ. ಆ ಹೆಣ್ಣು ಮಗಳನ್ನು ಕರೆದು ಮಾತನಾಡುತ್ತೇನೆ. ಮತ್ತೆ ಹೀಗೆ ಮಾತನಾಡಬೇಡಿ ಎಂದು ಸಚಿವರಿಗೆ ವಾರ್ನ್ ಮಾಡಿದ್ದೇನೆ ಎಂದರು.

ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡುವುದು ತಪ್ಪು. ಸಚಿವರಾಗಿ ಹೀಗೆ ಮಾತನಾಡುವುದು ಸರಿಯಲ್ಲ. ಮತ್ತೆ ಹೀಗೆಲ್ಲ ಮಾತನಾಡಕೂಡದು ಎಂದು ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು. ಆದರೆ, ರಾಜೀನಾಮೆ ಪಡೆಯಬೇಕು ಎಂಬ ಕಾಂಗ್ರೆಸ್ ಆಗ್ರಹದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸಚಿವ ಮಾಧುಸ್ವಾಮಿ ಹೇಳಿದ್ದೇನು?: ಕೆ.ಸಿ.ವ್ಯಾಲಿ ಸಂಬಂಧ ಕೆರೆಗಳ ವೀಕ್ಷಣೆಗೆ ಕೋಲಾರ ತಾಲೂಕಿನ ಎಸ್.ಅಗ್ರಹಾರ ಕೆರೆ ಬಳಿ ತೆರಳಿದ್ದರು. ಈ ವೇಳೆ ಕೆರೆಗಳ ಒತ್ತುವರಿ ತೆರವು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತೆಯರು ಮನವಿ ಮಾಡಲು ಮುಂದಾಗಿದ್ದರು. ಇದರಿಂದ ಸಿಡಿಮಿಡಿಗೊಂಡ ಮಾಧುಸ್ವಾಮಿಯವರು ರೈತ ಮಹಿಳೆಗೆ 'ಏಯ್ ಬಾಯಿ ಮುಚ್ಚು..ರಾಸ್ಕಲ್’ ಎಂದು ಹೇಳಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸಚಿವರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News