ಮೈಸೂರು: ಲಾರಿಗೆ ವಿದ್ಯುತ್ ತಂತಿ ತಗಲಿ ಮೂವರು ಕೂಲಿ ಕಾರ್ಮಿಕರು ಮೃತ್ಯು

Update: 2020-05-21 16:56 GMT

ಮೈಸೂರು,ಮೇ.21: ಮೆಕ್ಕೆ ಜೋಳದ ಮೇವು ತುಂಬಿಕೊಂಡು ಬರುತ್ತಿದ್ದ ಲಾರಿಗೆ ವಿದ್ಯುತ್ ತಂಗಿ ತಗಲಿದ ಪರಿಣಾಮ ಮೂವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದಿದೆ.

ಟಿ.ನರಸೀಪುರ ತಾಲೂಕಿನ ಹೊಸೂರು ಗ್ರಾಮದ ಮಹದೇವು, ತೇಜು ಮತ್ತು ಮಹದೇವ್ ನಾಯಕ ವಿದ್ಯುತ್ ತಂತಿ ತಗಲಿ ಮೃತಪಟ್ಟ ಕೂಲಿ ಕಾರ್ಮಿಕರೆಂದು ತಿಳಿದು ಬಂದಿದೆ.

ಮೆಕ್ಕೆ ಜೋಳವನ್ನು ಕೀಳನಪುರದಿಂದ ಮೈಸೂರಿನ ಪಿಂಜರಾಪೂಲ್‍ಗೆ ಮೇವು ಸಾಗಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ತಗಲಿದ ಪರಿಣಾಮ ಲಾರಿಯಲ್ಲಿದ್ದ ಕೂಲಿ ಕಾರ್ಮಿಕರಿಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಕೂಲಿ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ವರುಣಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News