ಮಂಡ್ಯ: ಸಂಪುಟದಿಂದ ಸಚಿವ ಮಾಧುಸ್ವಾಮಿ ವಜಾ ಮಾಡಲು ಒತ್ತಾಯಿಸಿ ರಸ್ತೆತಡೆ
ಮಂಡ್ಯ, ಮೇ 21: ಕಾನೂನು ಸಚಿವ ಜಿ.ಸಿ.ಮಾಧುಸ್ವಾಮಿ ಅವರು ರೈತ ಸಂಘದ ಹೋರಾಟಗಾರ್ತಿಯ ಬಗ್ಗೆ ಸಾರ್ವಜನಿಕರೆದರು ಕೆಟ್ಟದಾಗಿ ಮಾತನಾಡಿರುವ ಕ್ರಮ ಖಂಡಿಸಿ ರೈತಸಂಘದ ಕಾರ್ಯಕರ್ತರು ಗುರುವಾರ ಮದ್ದೂರು ತಾಲೂಕಿನ ಕೊಪ್ಪದಲ್ಲಿ ರಸ್ತೆ ತಡೆಸಿ ಪ್ರತಿಭಟನೆ ಮಾಡಿದರು.
ರೈತಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಸಚಿವರು ಮಹಿಳಾ ಹೋರಾಟಗಾರರ ಬಗೆ ನಡೆದುಕೊಳ್ಳಬೇಕಾದ ಕನಿಷ್ಠ ಪರಿಜ್ಞಾನ ಇಲ್ಲದಿರುವುದು ವಿಷಾದದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೋರಾಟಗಾರರ ಮೇಲೆ ಗೌರವವಿಲ್ಲದ ಇಂತಹ ಸಚಿವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಸಂಪುಟದಿಂದ ವಜಾ ಮಾಡಬೇಕು. ಮಾಧುಸ್ವಾಮಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಸಂಬಂಧ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹುರಗಲವಾಡಿ ರಾಮಯ್ಯ, ಉಮೇಶ್, ರಾಮಣ್ಣ, ಜಗದೀಶ್, ರಮೇಶ್, ಶಿವಲಿಂಗ, ಪುಟ್ಟಸ್ವಾಮಿ, ಕುಮಾರ್, ರಾಜೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.