ಮೈಸೂರು: ಮನೆಗಳಲ್ಲೇ ಸರಳ ರೀತಿಯಲ್ಲಿ ಈದುಲ್ ಫಿತ್ರ್ ಆಚರಣೆ

Update: 2020-05-25 18:24 GMT

ಮೈಸೂರು,ಮೇ.25: ಮುಸ್ಲಿಮರ ಪವಿತ್ರ ಹಬ್ಬವಾದ ಈದುಲ್ ಫಿತ್ರ್ ವಿಶೇಷ ಪ್ರಾರ್ಥನೆ ಯನ್ನು ಲಾಕ್ ಡೌನ್ ಹಿನ್ನಲೆ ಸೋಮವಾರ ಮನೆಗಳಲ್ಲೇ ಆಚರಿಸಲಾಯಿತು.

ಈದ್ ನಮಾಜ್ ವಿಶೇಷವಾಗಿ ಈದ್ಗಾ ಮೈದಾನದಲ್ಲಿ ಅಥವಾ ಮಸೀದಿಗಳಲ್ಲಿ ಆಚರಿಸುವ ಸಂಪ್ರದಾಯವಿದ್ದು, ಲಾಕ್ ಡೌನ್ ಕಾರಣ ಇದಕ್ಕೆ ಅವಕಾಶವಿರಲಿಲ್ಲ. ಈ ಕಾರಣದಿಂದ ಮುಸಲ್ಮಾನರು ತಮ್ಮ ತಮ್ಮ ಮನೆಗಳಲ್ಲಿ ಈದ್ ನಮಾಝ್ ಮಾಡಿದರು.

ನಮಾಝ್ ವೇಳೆ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದು ಕಂಡು ಬಂತು. ಪ್ರಾರ್ಥನೆಯಲ್ಲಿ ಕೋವಿಡ್ 19 ಮಹಾಮಾರಿ ಜಗತ್ತಿನಿಂದ ದೂರ ಹೋಗುವಂತೆ ಪ್ರಾರ್ಥಿಸಲಾಯಿತು.

ಗೆಳೆಯರು, ಬಂಧು ಬಾಂಧವರ ಜತೆ ಈದ್ಗಾ ಮೈದಾನದಲ್ಲಿ ಸಂಭ್ರಮದಿಂದ ನಮಾಝ್ ಮಾಡುವ ಮುಸ್ಲಿಮರಿಗೆ ಈ ಬಾರಿ ಇಂತಹ ಅವಕಾಶ ದೊರೆಯಲಿಲ್ಲ. ಇದರಿಂದ ಸಂಭ್ರಮದ ಕೊರತೆ ಎದ್ದು ಕಾಣುತ್ತಿತ್ತು. ಆದಾಗ್ಯೂ ಮನೆಗಳಲ್ಲಿ ನಮಾಝ್ ಆಚರಿಸಿ ಕುಟುಂಬದ ವರ ಜತೆ ಸಂತಸ ಹಂಚಿಕೊಂಡರು.

ಈದುಲ್ ಫಿತ್ರ್ ನಮಾಝ್ ಬಳಿಕ ಈದ್ಗಾ ಅಥವಾ ಮಸೀದಿಯಿಂದ ನೇರವಾಗಿ ಖಬರಸ್ತಾನ್ (ಸ್ಮಶಾನ) ಗೆ ಆಗಮಿಸಿ ಮೃತ ಪಟ್ಟಿರುವ ತಮ್ಮ ಬಂಧು ಬಾಂಧವರ ಸಮಾಧಿ ಬಳಿ ಪ್ರಾರ್ಥನೆ ನಡೆಸುವುದು ವಾಡಿಕೆ. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ.

ಟಿಪ್ಪು ಸರ್ಕಲ್ ಬಳಿಯ ಬಡಾ ಮಕಾನ್ ಸೇರಿದಂತೆ ನಗರದ ಬಹುತೇಕ ಮುಸ್ಲಿಂ ಸ್ಮಶಾನದ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಬಹುತೇಕ ಮುಸಲ್ಮಾನರು ಸ್ಮಶಾನದ ಬಳಿ ಆಗಮಿಸಿ ಪೊಲೀಸರನ್ನು ಕಂಡು ದೂರದಿಂದಲೇ ಸ್ಮಶಾನಕ್ಕೆ ನಮಿಸಿ ಹಿಂತಿರುಗಿದ್ದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News