ರಾಜ್ಯದಲ್ಲಿ 3,500 ಕೋಟಿ ರೂ.ಗಳಷ್ಟು ರಾಜಸ್ವ ಸಂಗ್ರಹ ಖೋತಾ ಸಾಧ್ಯತೆ

Update: 2020-05-26 15:50 GMT

ಬೆಂಗಳೂರು, ಮೇ 26: ಮಾರಕ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ 2020-21ನೆ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ 3,524 ಕೋಟಿ ರೂ.ಗಳಷ್ಟು ರಾಜಸ್ವ ಸಂಗ್ರಹ ಕಡಿಮೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ಮಂಗಳವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೇಲ್ಕಂಡ ಅಭಿಪ್ರಾಯ ವ್ಯಕ್ತವಾಗಿದೆ. ಆ ಹಿನ್ನೆಲೆಯಲ್ಲಿ ರಾಜಸ್ವ ಸಂಗ್ರಹ ದೃಷ್ಟಿಯಿಂದ ಶುಲ್ಕ ಇಳಿಕೆಗೆ ನಿರ್ಧರಿಸಲಾಗಿದೆ.

ಕೈಗೆಟಕುವ ದರಗಳ ಮನೆಗಳ ಖರೀದಿಯನ್ನು ಪ್ರೋತ್ಸಾಹಿಸಲು 20ಲಕ್ಷ ರೂ.ಮೌಲ್ಯದ ಅಪಾರ್ಟ್‍ಮೆಂಟ್‍ಗಳ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ.5ರಿಂದ 2ಕ್ಕೆ ಇಳಿಕೆ ಮಾಡಲು ಹಾಗೂ 35 ಲಕ್ಷ ರೂ. ಮೌಲ್ಯದವರೆಗಿನ ನೋಂದಣಿಗೆ ಶೇ.5ರಿಂದ ಶೇ.3ಕ್ಕೆ ಇಳಿಕೆ ಮಾಡಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿಸಲಾಗಿದೆ.

ಭೂ ಸುಧಾರಣೆಗೆ ರಾಜ್ಯದ 164 ತಾಲೂಕುಗಳಲ್ಲಿ ಭೂ ನ್ಯಾಯ ಮಂಡಳಿ ರಚಿಸಲು, ಡ್ರೋಣ್ ಆಧಾರಿತ ಸರ್ವೆ ಸಮಿತ್ವ ಯೋಜನೆಯಡಿ 16 ಸಾವಿರ ಗ್ರಾಮಗಳನ್ನು ಗುರುತಿಸಲಾಗಿದೆ. ಗ್ರಾಮ ನಿವಾಸಿಗಳಿಗೆ ಅವರ ವಾಸಸ್ಥಳದ ಆಸ್ತಿಗಳ ಪ್ರಾಪರ್ಟಿ ಕಾರ್ಡ್ ವಿತರಿಸುವ ಯೋಜನೆ ಇದಾಗಿದೆ. ದೇಶದ ಏಳು ಪ್ರಮುಖ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯದಲ್ಲಿಯೂ ಮೇಲ್ಕಂಡ ಉದ್ದೇಶಿತ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ.

ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎಸ್.ಆರ್.ವಿಶ್ವನಾಥ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News