ಕೊಟ್ಟ ಮಾತಿನಂತೆ ನನ್ನನ್ನು ಎಂಎಲ್‍ಸಿ ಮಾಡುತ್ತಾರೆ: ಆರ್.ಶಂಕರ್

Update: 2020-05-29 15:06 GMT

ಕೊಪ್ಪಳ, ಮೇ 29: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತಿನಂತೆ ನನ್ನನ್ನು ಎಂಎಲ್‍ಸಿ ಮಾಡುತ್ತಾರೆ ಎಂದು ಮಾಜಿ ಸಚಿವ ಆರ್.ಶಂಕರ್ ಹೇಳಿದ್ದಾರೆ.

ರಾಣೆಬೆನ್ನೂರು ನಗರದಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ ಶಾಸಕ ಉಮೇಶ ಕತ್ತಿಯವರ ನಿವಾಸದಲ್ಲಿ ಕೆಲ ಬಿಜೆಪಿ ಶಾಸಕರು ಸಭೆ ಸೇರಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಸಭೆಯಲ್ಲಿ ಭಾಗವಹಿಸಿಲ್ಲ. ಬೆಳಗ್ಗೆಯೇ ಬೆಂಗಳೂರಿನಿಂದ ರಾಣೆಬೆನ್ನೂರಿಗೆ ಬಂದಿದ್ದೇನೆ. ಸದ್ಯ ಎಂಎಲ್‍ಸಿ ಚುನಾವಣೆ ಸಮೀಪಿಸಿದ್ದು, ಶಾಸಕರು ಅವರವರಿಗೆ ಬೇಕೆನಿಸಿದ ಸ್ಥಾನಗಳಿಗಾಗಿ ಅವರ ಹಕ್ಕನ್ನು ಕೇಳಿದ್ದಾರೆ. ಆದರೆ ಇವೆಲ್ಲವನ್ನು ಮುಖ್ಯಮಂತ್ರಿಗಳು ನಿಭಾಯಿಸಿ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದರು.

ನನಗೆ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗೆ ನೂರಕ್ಕೆ ನೂರರಷ್ಟು ಇದೆ. ಈ ಬಗ್ಗೆ ಸಿಎಂ ಅವರೇ ಹೇಳಿರುವಾಗ ನಾನು ಅವರನ್ನು ಹೋಗಿ ಕೇಳುವ ಅಗತ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊರೋನ ಲಾಕ್‍ಡೌನ್‍ನಿಂದಾಗಿ ಬಹಳ ದಿನಗಳಿಂದ ನಾನು ಮುಖ್ಯಮಂತ್ರಿಗಳನ್ನು ಭೇಟಿಯಾಗಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಭೇಟಿ ಮಾಡಿದ್ದೆ. ಆಗ ಸಿಎಂ ವಿಧಾನ ಪರಿಷತ್ ಸ್ಥಾನ ಕೊಡುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದರು ಎಂದು ಆರ್.ಶಂಕರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News