ಒಂದು ವರ್ಷದ ಅವಧಿಗೆ ಸಚಿವರು, ಶಾಸಕರ ವೇತನ ಭತ್ಯೆ ಶೇ.30ರಷ್ಟು ಕಡಿತ: ಸರಕಾರದ ಆದೇಶ
Update: 2020-05-29 17:08 GMT
ಬೆಂಗಳೂರು, ಮೇ 29: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ಸಚಿವರು, ಉಭಯ ಸದನಗಳ ಸದಸ್ಯರು, ಸಭಾಪತಿಗಳು, ಉಪಸಭಾಪತಿಗಳು, ಸ್ಪೀಕರ್ ಹಾಗೂ ವಿಧಾನ ಮಂಡಲದ ಇತರೆ ಪದಾಧಿಕಾರಿಗಳು ಸಭೆಗಳಿಗೆ ಹಾಜರಾಗಲು ದಿನದ ಭತ್ಯೆ, ಪ್ರಯಾಣ ಭತ್ಯೆ, ವಾಹನ ಭತ್ಯೆ ಹೊರತುಪಡಿಸಿ ವೇತನ ಮತ್ತು ಇತರೆ ಭತ್ಯೆಗಳ ಶೇ.30ರಷ್ಟು ಕಡಿತಕ್ಕೆ ಆದೇಶಿಸಲಾಗಿದೆ.
ಈ ಹಿಂದೆ ಸಚಿವ ಸಂಪುಟಕ್ಕೆ ಶೇ.30ರಷ್ಟು ವೇತನ-ಭತ್ಯೆ ಕಡಿತಕ್ಕೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಇದೀಗ ವಿಧಾನ ಮಂಡಲ ಸದಸ್ಯರ ವೇತನ, ಪಿಂಚಣಿ ಮತ್ತು ಇತರೆ ಭತ್ಯೆಗಳು ಹಾಗೂ ದೂರವಾಣಿ ವೆಚ್ಚ, ಚುನಾವಣಾ ಕ್ಷೇತ್ರ ಭತ್ಯೆ, ಅಂಚೆ ವೆಚ್ಚ, ಕೊಠಡಿ ಸೇವಕರ ಭತ್ಯೆ, ಚುನಾವಣಾ ಕ್ಷೇತ್ರ ಪ್ರಯಾಣ ಭತ್ಯೆ, ನಿಗದಿತ ವಿಮಾನ ಮತ್ತು ರೈಲ್ವೆ ಪ್ರಯಾಣ ಭತ್ಯೆ ಇವುಗಳಲ್ಲಿ 2020ರ ಎಪ್ರಿಲ್ 1ರಿಂದ ಒಂದು ವರ್ಷದ ಅವಧಿಗೆ ಶೇ.30ರಷ್ಟು ಕಡಿತಗೊಳಿಸಲು ಸೂಚನೆ ನೀಡಲಾಗಿದೆ.