ಚಿತ್ರದುರ್ಗ: ಕಂಟೈನರ್ ನಲ್ಲಿ ಪ್ರಯಾಣಿಸುತ್ತಿದ್ದ 58ಕ್ಕೂ ಹೆಚ್ಚು ಕಾರ್ಮಿಕರಿಗೆ ಪೊಲೀಸರ ನೆರವು

Update: 2020-05-29 17:44 GMT
ಸಾಂದರ್ಭಿಕ ಚಿತ್ರ

ಚಿತ್ರದುರ್ಗ, ಮೇ 29: ಅನ್ನ, ನೀರಿಲ್ಲದೇ ತಮಿಳುನಾಡಿನಿಂದ ಉತ್ತರ ಪ್ರದೇಶದತ್ತ ಕಂಟೈನರ್ ನಲ್ಲಿ ಪ್ರಯಾಣಿಸುತ್ತಿದ್ದ 58ಕ್ಕೂ ಹೆಚ್ಚು ಕಾರ್ಮಿಕರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನಲೆಯಲ್ಲಿ ಪೊಲಿಸರು ಕಾರ್ಮಿಕರ ರಕ್ಷಣೆಗೆ ಧಾವಿಸಿರುವ ಘಟನೆ ಚಿತ್ರದುರ್ಗದ ಬಳಿ ನಡೆದಿದೆ.

ಅನ್ನ, ನೀರಿಲ್ಲದೇ ತಮಿಳುನಾಡಿನ ಚೆನ್ನೈನಿಂದ ಉತ್ತರ ಪ್ರದೇಶದತ್ತ ಕಂಟೈನರ್ ನಲ್ಲಿ  ಪ್ರಯಾಣಿಸುತ್ತಿದ್ದ 58 ಮಂದಿ ಕಾರ್ಮಿಕರನ್ನು ರಾಜ್ಯ ಪೊಲೀಸರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಗಪ್ಪನಹಳ್ಳಿ ಚೆಕ್ ಪೊಸ್ಟ್ ಬಳಿ ಕಂಟೈನರ್ ತಡೆದು ಕಾರ್ಮಿಕರನ್ನು ರಕ್ಷಿಸಿದ್ದಾರೆ.

ತಮಿಳುನಾಡಿನ ಚೆನ್ನೈನಿಂದ ಉತ್ತರ ಪ್ರದೇಶಕ್ಕೆ ತೆರಳಲು ಸರಕಾರದ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕಾರ್ಮಿಕರೆಲ್ಲರೂ ಕಂಟೈನರ್ ನಲ್ಲಿ ಉತ್ತರ ಪ್ರದೇಶದತ್ತ ಪ್ರಯಾಣ ಬೆಳೆಸಿದರು. ಅನ್ನ-ನೀರು, ಗಾಳಿ-ಬೆಳಕು ಇಲ್ಲದೇ ಕಂಟೈನರ್ ನಲ್ಲಿ ಒಬ್ಬರ ಮೇಲೊಬ್ಬರು ಕುಳಿತು ನರಕಯಾತನೆ ಅನುಭವಿಸುತ್ತಿದ್ದ ದೃಶ್ಯವೊಂದನ್ನು ಕಂಟೈನರ್ ನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕನೋರ್ವ ತಮ್ಮ ಸಂಬಂಧಿಕರಿಗೆ ಕಳುಹಿಸಿದ್ದ. ಇಲ್ಲಿ ತಮಗೆ ಊಟವಿಲ್ಲ, ಕೆಳಗೆ ಇಳಿದರೆ ಜನ ಕಲ್ಲಿನಲ್ಲಿ ಹೊಡಿಯುತ್ತಾರೆ ಎಂದು ಕಾರ್ಮಿಕ ತನ್ನ ಅಳಲು ತೋಡಿಕೊಂಡಿದ್ದನು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯ ಪೊಲೀಸ್ ಇಲಾಖೆ ಎಚ್ಚೆತುಕೊಂಡು ತಕ್ಷಣವೇ ಜಿಲ್ಲಾ ಪೊಲೀಸರಿಗೆ ಮಾಹಿತಿ ರವಾನಿಸಿದರು.

ನಂತರ ಸ್ಥಳೀಯ ಪೊಲೀಸರು ಅವರನ್ನು ನಾಗಪ್ಪನಹಳ್ಳಿ ಚೆಕ್ ಪೊಸ್ಟ್ ಬಳಿ ತಡೆದಿದ್ದರು. ಸ್ಥಳೀಯ ವಸತಿ ಶಾಲೆಯಲ್ಲಿ ಕ್ವಾರೆಂಟೈನ್ ಆಗಿರುವ ಕಾರ್ಮಿಕರ ಪೈಕಿ 27 ಜನರಿಗೆ ಕೊರೋನ ದೃಢಪಟ್ಟಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News