ಸಿಎಂ ಸ್ಥಾನದ ಬಗ್ಗೆ ಉಮೇಶ್ ಕತ್ತಿ ಕನಸು ಕಾಣಬೇಕಷ್ಟೇ: ಬಿಜೆಪಿ ಹಿರಿಯ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

Update: 2020-05-30 11:38 GMT

ಬೆಂಗಳೂರು, ಮೇ 30: ಹಿರಿಯ ಶಾಸಕ ಉಮೇಶ್ ಕತ್ತಿ ಅವರಿಗೆ ಮುಖ್ಯಮಂತ್ರಿಯಾಗುವ ಆಸೆ ಇರಬಹುದು. ಎಲ್ಲರಿಗೂ ಸಿಎಂ ಆಗಬೇಕೆಂಬ ಆಸೆ ಸಹಜ. ಆದರೆ, ಇದೀಗ ಅವರು ಸಿಎಂ ಸ್ಥಾನದ ಬಗ್ಗೆ ಕೇವಲ ಕನಸು ಕಾಣಬೇಕು ಅಷ್ಟೇ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇಂದಿಲ್ಲಿ ಲೇವಡಿ ಮಾಡಿದ್ದಾರೆ.

ಶನಿವಾರ ಇಲ್ಲಿನ ಸದಾಶಿವನಗರದಲ್ಲಿ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಬಗ್ಗೆ ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಯಾರು ಪಕ್ಷದ ಬಗ್ಗೆ ಅಸಮಾಧಾನವಿದೆ ಎಂದು ಹೇಳುತ್ತಾರೋ ಅವರನ್ನು ಕೇಳಬೇಕು. ಇದೀಗ ನಾವೆಲ್ಲರೂ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬೆಂಬಲಿಸಬೇಕು ಎಂದರು.

ಬಿಜೆಪಿ ಸರಕಾರ ಅಸ್ಥಿರಗೊಳಿಸುವ ಮಾತುಗಳನ್ನು ಯಾರೂ ಆಡಬಾರದು. ಅತೃಪ್ತ ಶಾಸಕರು ಬಿಜೆಪಿಗೆ ಬಾರದೆಹೋಗಿದ್ದರೆ ರಾಜ್ಯದಲ್ಲಿ ಸರಕಾರವೇ ರಚನೆ ಆಗುತ್ತಿರಲಿಲ್ಲ. ಮಾತನಾಡುವವರು ಇದೀಗ ತಾಳ್ಮೆಯಿಂದ ಇರಬೇಕು. ಉಮೇಶ್ ಕತ್ತಿ ಒಬ್ಬರಿಂದಲೇ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿಲ್ಲ ಎಂದು ತಿರುಗೇಟು ನೀಡಿದರು.

ಸರಕಾರ ಕೆಡವುದಕ್ಕೆ ಪ್ರಯತ್ನ ಮಾಡುವುದು ಸರಿಯಲ್ಲ. ಕೇಂದ್ರದ ವರಿಷ್ಟರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕತ್ತಿಯವರೇ ನೀವು ಮಂತ್ರಿಯಾದರೆ ನಮಗೂ ಸಂತೋಷ. ಸ್ವಲ್ಪ ದಿನ ತಾಳ್ಮೆಯಿಂದ ಇರಿ. ಮನಸೋ ಇಚ್ಛೆ ಮಾತನಾಡುವುದನ್ನು ಮೊದಲು ನಿಲ್ಲಿಸಿ, ಬಿಎಸ್‍ವೈ ಅವರನ್ನು ಬೆಂಬಲಿಸಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News