ಉದ್ಯಮಿಗಳ ಸಾವಿರಾರು ಕೋಟಿ ರೂ.ಸಾಲ ಮನ್ನಾ ಮಾಡುವ ಪ್ರಧಾನಿ ರೈತರ ಬೇಡಿಕೆಗೆ ಕಿವಿಕೊಟ್ಟಿಲ್ಲ: ಸಿದ್ದರಾಮಯ್ಯ

Update: 2020-06-02 16:01 GMT

ಬೆಂಗಳೂರು, ಜೂ. 2: ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿ ಸಾಲಮನ್ನಾ ಮಾಡುತ್ತಿರುವ ಪ್ರಧಾನಿ ಮೋದಿ ರೈತರ ಸಾಲವನ್ನು ಒಂದು ಬಾರಿ ಮನ್ನಾ ಮಾಡಿ ಎಂಬ ರೈತರ ಬೇಡಿಕೆಗೆ ಕಿವಿಕೊಟ್ಟಿಲ್ಲ. ಯುಪಿಎ ಸರಕಾರ ಸಾಲಮನ್ನಾ ಮಾಡಿದ್ದೇ ಕೊನೆ. ಅಲ್ಲಿಂದೀಚೆಗೆ ನಯಾಪೈಸೆ ಸಾಲಮನ್ನಾ ಆಗಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ಕೊರೋನ ಹಾವಳಿಯ ಈ ಕಾಲದಲ್ಲಿ ರೈತರ ಉತ್ಪಾದನಾ ವೆಚ್ಚ ಗಣನೀಯವಾಗಿ ಏರುವ ಸಾಧ್ಯತೆ ಇದೆ. ಈ ಸಂದರ್ಭಕ್ಕೆ ತಕ್ಕಂತೆ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸಿ ನೆರವಾಗಬೇಕಾಗಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತರಿಗೆ ಮೋಸ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೃಷಿ ತಜ್ಞ ಸ್ವಾಮಿನಾಥನ್ ವರದಿ ಪ್ರಕಾರ ರೈತರ ಬೆಳೆಗೆ ನೀಡುವ ಯೋಗ್ಯ ಬೆಲೆ ಎಂದರೆ ಸಿ-2 ಉತ್ಪಾದನಾ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ. ಪ್ರಧಾನಿ ಮೋದಿ ಸರಕಾರ ಘೋಷಿತ ಕನಿಷ್ಟ ಬೆಂಬಲ ಬೆಲೆ ಸ್ವಾಮಿನಾಥನ್ ವರದಿ ಹೇಳಿರುವ ಯೋಗ್ಯ ಬೆಲೆಯೇ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸ್ವಾಮಿನಾಥನ್ ವರದಿ ಪ್ರಕಾರ ಉತ್ಪಾದನಾ ವೆಚ್ಚ ಎಂದರೆ ಬೀಜ, ಗೊಬ್ಬರ ಮತ್ತು ಹೊರಕೂಲಿಯ ಜೊತೆ ಭೂ ಸವಕಳಿ ವೆಚ್ಚ, ಹೂಡಿದ ಬಂಡವಾಳದ ಮೇಲಿನ ಬಡ್ಡಿ ಮತ್ತು ರೈತ ಕುಟುಂಬದ ಕೂಲಿಯನ್ನು ಪರಿಗಣಿಸಬೇಕಾಗುತ್ತದೆ. ಅದನ್ನು ಮೋದಿ ಸರಕಾರ ಪಾಲಿಸಿದೆಯೇ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಬೆಳೆಯ ಉತ್ಪಾದನಾ ವೆಚ್ಚಕ್ಕೆ ಶೇ.50ರಷ್ಟು ಲಾಭವನ್ನು ಸೇರಿಸಿ ಕನಿಷ್ಟ ಬೆಂಬಲ ಬೆಲೆ ನೀಡುತ್ತೇವೆ ಎಂಬುದು ಪ್ರಧಾನಿ ಮೋದಿ ಘೋಷಣೆಯಾಗಿತ್ತು. ಆದರೆ, ಉತ್ಪಾದನಾ ವೆಚ್ಚದ ಲೆಕ್ಕದಲ್ಲಿಯೇ ಮೋದಿ ಸರಕಾರ ರೈತರಿಗೆ ಮೋಸ ಮಾಡಿದೆ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಹದಿನಾಲ್ಕು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿರುವ ಪ್ರಧಾನಿ ಮೋದಿ ಸರಕಾರ ಇದರಿಂದ ರೈತರ ಬೆಳೆಗೆ ದುಪ್ಪಟ್ಟು ಬೆಲೆ ಸಿಗಲಿದೆ ಎಂದು ಹೇಳಿಕೊಳ್ಳುತ್ತಿರುವುದು ಅಮಾಯಕ ರೈತರ ಹಾದಿ ತಪ್ಪಿಸುವ ಕುತಂತ್ರ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News