ಇಂದಿರಾ ಕ್ಯಾಂಟೀನ್ ಅವ್ಯವಹಾರ ಆರೋಪ: ಸಿದ್ದರಾಮಯ್ಯ, ಕೆ.ಜೆ.ಜಾರ್ಜ್ ಗೆ ಲೋಕಾಯುಕ್ತ ಕೋರ್ಟ್ ಕ್ಲೀನ್ ಚಿಟ್

Update: 2020-06-04 15:15 GMT

ಬೆಂಗಳೂರು, ಜೂ.4: ಇಂದಿರಾ ಕ್ಯಾಂಟೀನ್‍ ಗಳ ಸ್ಥಾಪನೆ ಹಾಗೂ ಆಹಾರ ಪೂರೈಕೆಯಲ್ಲಿ ನಡೆದಿದೆ ಎನ್ನಲಾಗಿದ್ದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಸಲ್ಲಿಕೆಯಾಗಿದ್ದ ದೂರನ್ನು ಲೋಕಾಯುಕ್ತ ಕೋರ್ಟ್ ವಜಾಗೊಳಿಸಿದೆ.

ದೂರಿಗೆ ಸಂಬಂಧಿಸಿದಂತೆ ದೂರುದಾರರಿಂದ ಯಾವುದೇ ಖಚಿತ ಸಾಕ್ಷಿಗಳನ್ನು ಒದಗಿಸಲಾಗಿಲ್ಲ. ರಾಜಕೀಯ ದುರುದ್ದೇಶದಿಂದ ದೂರು ಸಲ್ಲಿಸಲಾಗಿದೆ ಎಂದಿರುವ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ, ಪ್ರಕರಣದಲ್ಲಿ ಮೊದಲ ಇಬ್ಬರು ಆರೋಪಿಗಳಾದ ಸಿದ್ದರಾಮಯ್ಯ ಮತ್ತು ಕೆ.ಜೆ.ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

ಜೊತೆಗೆ ಈ ಆರೋಪಗಳಿಗೆ ಬಿಬಿಎಂಪಿಯ ಖಾತೆಗಳ ವಿಭಾಗವು ಉತ್ತರಿಸಬೇಕಾಗಿದೆ ಎಂದು ಕೋರ್ಟ್ ಹೇಳಿದ್ದು, ಅಂದಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಐಎಫ್‍ಎಸ್ ಅಧಿಕಾರಿ ಮನೋಜ್‍ ರಂಜನ್ ವಿರುದ್ಧದ ದೂರನ್ನು ಬಾಕಿ ಉಳಿಸಿಕೊಂಡಿದೆ. ಇದಕ್ಕೆ ಬಿಬಿಎಂಪಿ ಆಯುಕ್ತರು ಪ್ರತಿಕ್ರಿಯಿಸಬೇಕೆಂದು ಆದೇಶ ತಿಳಿಸಿದೆ. ಜುಲೈ 15, 2020ರೊಳಗೆ ರಂಜನ್ ಮತ್ತು ಬಿಬಿಎಂಪಿ ಆಯುಕ್ತರಿಂದ ಲೋಕಾಯುಕ್ತ ನ್ಯಾಯಾಲಯ ಪ್ರತಿಕ್ರಿಯೆಗಳನ್ನು ನೀಡುವಂತೆ ಸೂಚಿಸಿದೆ. 

ಇಂದಿರಾ ಕ್ಯಾಂಟೀನ್‍ನಲ್ಲಿ ಆಹಾರ ಪೂರೈಕೆ ಸಂಬಂಧ ಸಿದ್ದರಾಮಯ್ಯ, ಜಾರ್ಜ್ ಮತ್ತು ರಂಜನ್ ಅವರು ಸುಳ್ಳು ಬಿಲ್‍ಗಳನ್ನು ಸೃಷ್ಟಿಸಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಲಾಲ್‍ಬಹದ್ದೂರ್ ಶಾಸ್ತ್ರಿ ನಗರದ ನಿವಾಸಿ ಗಣೇಶ್ ಸಿಂಗ್ ಎನ್ನುವವರು ದೂರು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News