ಪಂಚಪೀಠದ ಬೆಂಬಲ ಪಡೆದು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಮತ್ತೆ ಹೋರಾಟ: ಮಾಜಿ ಸಚಿವ ಎಂ.ಬಿ.ಪಾಟೀಲ್

Update: 2020-06-04 18:17 GMT

ಬೆಂಗಳೂರು, ಜೂ.4: ಪಂಚಪೀಠದವರೂ ಸೇರಿ ಎಲ್ಲರ ವಿಶ್ವಾಸ ಗಳಿಸಿ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗಾಗಿ ತಮ್ಮ ಹೋರಾಟವನ್ನು ಪುನಃ ಮುಂದುವರೆಸುವುದಾಗಿ ಲಿಂಗಾಯತ ಧರ್ಮ ಚಳವಳಿಯ ರೂವಾರಿ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎಂ.ಬಿ.ಪಾಟೀಲ್ ಘೋಷಿಸಿದ್ದಾರೆ.

ಆನ್‍ಲೈನ್ ವೆಬ್‍ಪೋರ್ಟಲ್‍ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಹೇಳಿಕೆಯನ್ನು ನೀಡಿರುವ ಅವರು, ಕೊರೋನ ನಿಯಂತ್ರಣಕ್ಕೆ ಬಂದ ಬಳಿಕ ಮತ್ತು ಲಾಕ್‍ಡೌನ್ ಸಡಿಲಿಕೆ ಬಳಿಕ ಲಿಂಗಾಯತ ಪ್ರತ್ಯೇಕ ಧರ್ಮದ ಎರಡನೇ ಹಂತದ ಹೋರಾಟ ಪ್ರಾರಂಭಿಸಲಾಗುವುದೆಂದು ತಿಳಿಸಿದ್ದಾರೆ.

ಲಿಂಗಾಯತರನ್ನು ಶೂದ್ರ ಗುಂಪಿಗೆ ಸೇರಿಸಲಾಗಿದೆ. ಇದನ್ನು ನನ್ನಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಲಿಂಗಾಯತ ಸಮುದಾಯದ ಸ್ವಾಮೀಜಿಗಳೆಲ್ಲರೂ ಶೂದ್ರರೆ ಆಗಿದ್ದಾರೆ. ಬಸವ ತತ್ವ ಪರಿಪಾಲಕರಾಗಿರುವ ನನ್ನ ಸಮುದಾಯ ಶೂದ್ರರ ಗುಂಪಿಗೆ ಸೇರುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಧರ್ಮಕ್ಕಾಗಿ ತಮ್ಮ ಹೋರಾಟ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಇಂದು ವೀರಶೈವ ಎಂದು ಹೇಳಿಕೊಳ್ಳುವವರೆಲ್ಲ ಹಿಂದೂ ಲಿಂಗಾಯತರೇ ಆಗಿದ್ದಾರೆ. ಇದಕ್ಕೆ ದಾಖಲೆಗಳೂ ಇವೆ. ಪ್ರತ್ಯೇಕ ಧರ್ಮ ವಿರೋಧಿಸುವ ರಂಭಾಪುರಿ ಶ್ರೀಗಳು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಹ ಹಿಂದೂ ಲಿಂಗಾಯತರಾಗಿದ್ದಾರೆ ಎಂದು ಹೇಳಿದರು.

ನಾನು ಬಸವ ಜನ್ಮಭೂಮಿಯಿಂದ ಬಂದವ. ಬಸವ ಧರ್ಮ ಜಾಗತಿಕ ಧರ್ಮ ಆಗಬೇಕು. ಬಸವಣ್ಣನವರ ತತ್ವಗಳು ಜಾಗತಿಕ ಮಟ್ಟದಲ್ಲಿ ಪ್ರಸಾರ ಆಗಬೇಕು. ಬಸವಣ್ಣನವರನ್ನು ನಾವೆಲ್ಲರೂ ಕರ್ನಾಟಕದ ಮಟ್ಟದಲ್ಲಿಯೇ ಕಟ್ಟಿ ಹಾಕಿಬಿಟ್ಟಿದ್ದೇವೆ. ಜೈನ, ಬೌದ್ಧ, ಕ್ರೈಸ್ತ ಧರ್ಮಗಳಂತೆ ಬಸವ ಧರ್ಮ ಸಹ ಜಾಗತಿಕ ಮಟ್ಟದಲ್ಲಿ ಗುರುತಿಸಬೇಕು. ಆ ಮೂಲಕ ಬಸವಣ್ಣನ ತತ್ವಗಳು, ಜಾತಿರಹಿತ ಸಮಾಜದ ಪರಿಕಲ್ಪನೆ ಜಗತ್ತಿಗೆ ತಿಳಿಯಬೇಕು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News