ವಿದ್ಯುತ್ ತಂತಿ ಸ್ಪರ್ಶಿಸಿ 7ನೇ ತರಗತಿ ವಿದ್ಯಾರ್ಥಿನಿ ಮೃತ್ಯು

Update: 2020-06-05 18:06 GMT

ಬಾಗೇಪಲ್ಲಿ, ಜೂ.5: ವಿದ್ಯುತ್ ತಂತಿ ಸ್ಪರ್ಶಿಸಿ 7 ನೇ ತರಗತಿಯ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ತಾಲೂಕಿನ ದೇವರಗುಡಿಪಲ್ಲಿ ಗ್ರಾಮದ ಭಜಂತ್ರಿ ಮುನೇಂದ್ರ ಮತ್ತು ಶಿವಮ್ಮ ದಂಪತಿಗಳ ಎರಡನೇ ಮಗಳಾದ ಎಂ.ನವ್ಯ ಮೃತ ವಿದ್ಯಾರ್ಥಿನಿ. 

ನವ್ಯ ತನ್ನ ಸ್ನೇಹಿತರೊಂದಿಗೆ ತಮ್ಮ ಮನೆ ಮುಂಭಾಗದ ರಸ್ತೆಯಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಆಟದ ವಸ್ತುವೊಂದು ನಿರ್ಮಾಣ ಹಂತದಲ್ಲಿರುವ ಮನೆಯ ಮೇಲ್ಚಾವಣಿ ಮೇಲೆ ಬಿದ್ದಿದೆ. ಕಬ್ಬಿಣದ ಕಂಬಿಯ ಸಹಾಯದಿಂದ ಮನೆ ಮೇಲ್ಚಾವಣಿ ಮೇಲಿದ್ದ ಆಟದ ವಸ್ತುವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದ ವೇಳೆ ಅಯುತಪ್ಪಿ ಕಬ್ಬಿಣದ ಕಂಬಿ ನಿರ್ಮಾಣ ಹಂತದ ಮನೆ ಪಕ್ಕದಲ್ಲೆ ಹಾದು ಹೋಗಿರುವ 11 ಕೆ.ವಿ.ವಿದ್ಯುತ್ ತಂತಿಗೆ ತಗಲಿದೆ. ಈ ಸಂದರ್ಭ ವಿದ್ಯುತ್ ಪ್ರವಹಿಸಿದ್ದು, ನವ್ಯ ಘಟನಾ ಸ್ಥಳದಲ್ಲೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News