ರಾಜ್ಯಸಭೆಯಲ್ಲಿ ರಾಜ್ಯದ ಧ್ವನಿಯಾಗಿ ಕೆಲಸ ಮಾಡುತ್ತೇನೆ: ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ

Update: 2020-06-09 11:55 GMT

ಬೆಂಗಳೂರು, ಜೂ.9: ಪಕ್ಷದಲ್ಲಿ ಸೂಕ್ತವಾದ ಸ್ಥಾನಮಾನ ಸಿಗುತ್ತೆ ಅನ್ನುವ ವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ರಾಜ್ಯಸಭೆಗೆ ನನ್ನನ್ನು ಅಭ್ಯರ್ಥಿಯನ್ನಾಗಿ ವರಿಷ್ಠರು ಆಯ್ಕೆ ಮಾಡಿರುವುದು ಸಂತಸ ತಂದಿದೆ. ರಾಜ್ಯಸಭೆಯಲ್ಲಿ ರಾಜ್ಯದ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ ತಿಳಿಸಿದರು.

ಮಂಗಳವಾರ ನಗರದ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭೇಟಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಳಿ ಬಿ.ಫಾರಂ ಪಡೆಯುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯಸಭೆ ಸದಸ್ಯತ್ವದ ಆಕಾಂಕ್ಷಿಗಳಾಗಿದ್ದವರೆಲ್ಲ ನಮ್ಮ ಮುಖಂಡರೆ. ಯಾರನ್ನೂ ಹಿಂದಿಕ್ಕುವಂತಹ ಮಾತಿಲ್ಲ. ಅವರೆಲ್ಲ ದೂರವಾಣಿ ಕರೆ ಮಾಡಿ ನನಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಈರಣ್ಣ ಕಡಾಡಿ ತಿಳಿಸಿದರು.

ಮತ್ತೊಬ್ಬ ಅಭ್ಯರ್ಥಿ ಅಶೋಕ್ ಗಸ್ತಿ ಮಾತನಾಡಿ, ಅತ್ಯಂತ ಚಿಕ್ಕ ಸಮುದಾಯದಿಂದ ಬಂದಿರುವ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಬಿಜೆಪಿ ಅವಕಾಶ ಕಲ್ಪಿಸಿದೆ. ಪಕ್ಷದ ನಾಯಕರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆಯಾಗದಂತೆ ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News