ಸದಾಶಿವ ಆಯೋಗದ ವರದಿ ಕೈಬಿಡಲು ಒತ್ತಾಯಿಸಿ ತಾಂಡಾ ರಕ್ಷಣಾ ವೇದಿಕೆಯಿಂದ ಪತ್ರ ಚಳವಳಿ
Update: 2020-06-10 17:33 GMT
ಬೆಳಗಾವಿ, ಜೂ.10: ನ್ಯಾ.ಸದಾಶಿವ ಆಯೋಗದ ವರದಿಯನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಬಂಜಾರ ಸಮುದಾಯದ ಮುಖಂಡರು ಹಾಗೂ ತಾಂಡಾ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಪತ್ರ ಚಳವಳಿ ಮೂಲಕ ಪ್ರತಿಭಟನೆ ನಡೆಸಿದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಮೀಸಲಾತಿಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಸಾಮಾಜಿಕ ನ್ಯಾಯಕ್ಕೆ ಪೂರಕವಾದಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ 3,591 ತಾಂಡಗಳಿದ್ದು, ಪ್ರತಿಯೊಂದು ಮನೆಯಿಂದಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆಯಲಾಗುತ್ತಿದೆ. ಯಾವುದೇ ಕಾರಣಕ್ಕೂ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಬಾರದೆಂದು ಪತ್ರದ ಮೂಲಕ ಒತ್ತಾಯಿಸಿದ್ದೇವೆ ಎಂದು ಬಂಜಾರ ಸಮಾಜದ ಮುಖಂಡ ಶಂಕರ ಚವ್ಹಾಣ ತಿಳಿಸಿದ್ದಾರೆ.