ದರೋಡೆ ಪ್ರಕರಣ ಭೇದಿಸಿದ ವಿರಾಜಪೇಟೆ ಪೊಲೀಸರು: 12 ಲಕ್ಷ ರೂ. ಮೌಲ್ಯದ ಮಾಲು ವಶ
ಮಡಿಕೇರಿ, ಜೂ.15: ಇತ್ತೀಚೆಗೆ ಕೊಡಗು ಜಿಲ್ಲೆಯ ನಾಗರೀಕರಲ್ಲಿ ಭೀತಿ ಮೂಡಿಸಿದ್ದ ವಿರಾಜಪೇಟೆ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ವಿರಾಜಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ ನಾಲ್ಕು ವಾಹನಗಳು ಸಹಿತ 12 ಲಕ್ಷ ರೂ.ಮೌಲ್ಯದ ಮಾಲನ್ನು ವಶ ಪಡಿಸಿಕೊಂಡಿದ್ದಾರೆ.
ಮೇ 21 ರಂದು ರಾತ್ರಿ ವಿರಾಜಪೇಟೆ ಪಟ್ಟಣದ ಶಿವಾಸ್ ಜಂಕ್ಷನ್ ಬಳಿಯ ಮನೆಯೊಂದಕ್ಕೆ ನುಗ್ಗಿ ಮನೆಯಲಿದ್ದವರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣದ ಪತ್ತೆಗಾಗಿ ರಚಿಸಲಾಗಿದ್ದ ತನಿಖಾ ತಂಡವು ಜೂ.9 ರಂದು ಎಮ್ಮೆಮಾಡು ನಿವಾಸಿ ಇಬ್ರಾಹಿಂ ಖಲೀಲ್ ಎಂಬ ಆರೋಪಿಯನ್ನು ವಶಕ್ಕೆ ಪಡೆಯತು. ವಿಚಾರಣೆ ತೀವ್ರಗೊಳಿಸಿದಾಗ ಹಲವು ಅಪರಾಧ ಪ್ರಕರಣಗಳು ಬೆಳೆಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆತನಿಂದ ಕೃತ್ಯಕ್ಕೆ ಬಳಸಿದ ಒಂದು ಮಾರುತಿ 800 ಕಾರನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಾದ ಎಮ್ಮೆಮಾಡು ನಿವಾಸಿಗಳಾದ ಕಡುವಣಿ ಅಶ್ರಫ್ ಮತ್ತು ಮುಸ್ತಾಫ ಅವರನ್ನು ಜೂ.14 ರಂದು ಬಂಧಿಸಲಾಯಿತು. ತೀವ್ರ ತನಿಖೆಗೆ ಒಳಪಡಿಸಿದಾಗ ಆರೋಪಿಗಳು ಈ ಹಿಂದೆ ಮೈಸೂರು ಜಿಲ್ಲೆ ಹಾಗೂ ಕೊಡಗು ಜಿಲ್ಲೆಯಲ್ಲಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿದೆ.
ಅಲ್ಲದೆ ಇದೇ ಆರೋಪಿಗಳು ಎರಡು ತಿಂಗಳ ಹಿಂದೆ ವಿರಾಜಪೇಟೆ ನಗರದ ಶ್ರೀನಿವಾಸ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದು, ಅಲ್ಲಿಂದ ಕದ್ದೊಯ್ದಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಮಡಿಕೇರಿ ಗ್ರಾಮಾಂತರ ಠಾಣೆ ಹಾಗು ನಾಪೋಕ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾಫಿ ಮತ್ತು ಕರಿಮೆಣಸು ಕಳ್ಳತನದ ಒಂದೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕಂಡು ಬಂದಿದ್ದು ಸದರಿ ಪ್ರಕರಣಗಳಲ್ಲಿ 3 ಚೀಲ ಕಾಫಿ ಹಾಗು 400 ಕೆ.ಜಿ ಕರಿಮೆಣಸನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಈ ಆರೋಪಿಗಳ ಬಂಧನದಿಂದ ವಿರಾಜಪೇಟೆ ನಗರದ- 2 ಪ್ರಕರಣ, ಮಡಿಕೇರಿ ಗ್ರಾಮಾಂತರ ಠಾಣೆಯ-1 ಹಾಗೂ ನಾಪೋಕ್ಲು ಪೊಲೀಸ್ ಠಾಣೆಯ-1 ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಅಂದಾಜು 12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಮೊಬೈಲ್ ಫೋನ್, ಕಾಫಿ, ಕಾಳುಮೆಣಸು ಮತ್ತು 3 ಕಾರು ಒಂದು ಗೂಡ್ಸ್ ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳು ಮುಂದಿನ ದಿನಗಳಲ್ಲಿ ಕೊಡಗು ಹಾಗೂ ಮೈಸೂರು ಜಿಲ್ಲೆಯ ಶ್ರೀಮಂತರ ಮನೆಗಳನ್ನು ಗುರುತಿಸಿ ದರೋಡೆ ಮಾಡುವ ಸಂಚನ್ನು ರೂಪಿಸಿದ್ದರು. ಇವರುಗಳ ಬಂಧನದಿಂದ ಮುಂದೆ ನಡೆಯಬಹುದಾಗಿದ್ದ ಹಲವಾರು ಅಪರಾಧ ಪ್ರಕರಣಗಳು ತಪ್ಪಿದಂತಾಗಿದೆ ಎಂದು ಎಸ್ಪಿ ತಿಳಿಸಿದರು.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ವಿರಾಜಪೇಟೆ ಡಿ.ವೈ.ಎಸ್.ಪಿ. ಜಯಕುಮಾರ್, ವಿರಾಜಪೇಟೆ ಸಿ.ಪಿ.ಐ ಕ್ಯಾತೇಗೌಡ, ವಿರಾಜಪೇಟೆ ನಗರ ಠಾಣಾ ಪಿ.ಎಸ್.ಐ ಹೆಚ್.ಎಸ್ ಬೋಜಪ್ಪ ರವರ ನೇತೃತ್ವದಲ್ಲಿ ಪ್ರೋಬೆಷನರಿ ಪಿ.ಎಸ್.ಐ ರವರುಗಳಾದ ವಿನಯ ಕುಮಾರ್ ಸಿ, ಎಸ್.ಅಭಿಜಿತ್, ಮಂಜುನಾಥ.ಎಸ್, ಎ.ಎಸ್.ಐ ರವರುಗಳಾದ ಎಂ.ಸಿ ನಂಜಪ್ಪ, ಎಂ.ಪಿ ನಾಣಿಯಪ್ಪ, ಸಿ.ವಿ ಶ್ರೀಧರ್, ಸಿಬ್ಬಂದಿಯವರುಗಳಾದ ಬಿ.ಎಂ ರಾಮಪ್ಪ, ಹೆಚ್.ಸಿ ಸುರೇಂದ್ರ, ಕೆ.ಡಿ ಮನು, ಕೆ.ಎ ಅಬ್ದುಲ್ ಮಜೀದ್, ಮುಸ್ತಾಫ, ಪಿ.ಯು ಮುನೀರ್, ಸಂತೋಷ್ ದೊಡ್ಡಮನಿ, ಎಂ.ಚಂದ್ರಶೇಖರ, ಬಿ.ಟಿ ಪ್ರಧೀಪ, ಕೆ.ಪಿ ರಮೇಶ್, ಎನ್.ಎಸ್ ಲೊಕೇಶ, ಗಿರೀಶ, ಈರಪ್ಪ ವಠಾರ, ಮಹೇಶ, ಯೋಗೇಶ, ಪ್ರವೀಣ, ರಾಜೇಶ್ ಹಾಗೂ ಗಿರೀಶ್ ಅವರು ಪಾಲ್ಗೊಂಡಿದ್ದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಎಸ್ಪಿ ಶ್ಲಾಘಿಸಿದರು.