ಚಾಮರಾಜನಗರ: ಕೇವಲ ನಾಲ್ಕು ಗಂಟೆಯಲ್ಲಿ ಅಪಹರಣ ಪ್ರಕರಣವನ್ನು ಭೇದಿಸಿದ ಪೊಲೀಸರು

Update: 2020-06-17 17:03 GMT
ಸಾಂದರ್ಭಿಕ ಚಿತ್ರ

ಚಾಮರಾಜನಗರ, ಜೂ.17: ಜಿಲ್ಲಾಸ್ಪತ್ರೆಯಲ್ಲಿ ಆರು ದಿನದ ಮಗು ಅಪಹರಣ ಪ್ರಕರಣವನ್ನು ಕೇವಲ ನಾಲ್ಕೇ ಗಂಟೆಯಲ್ಲಿ ಭೇದಿಸುವಲ್ಲಿ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. 

ಮಗು ಅಪಹರಿಸಿದ್ದ ಮಹಿಳೆಯನ್ನು ಹುಣಸೂರಿನಲ್ಲಿ ಪತ್ತೆಹಚ್ಚುವುದರೊಂದಿಗೆ ಮಗು ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.

ಇಂದು ಮಧ್ಯಾಹ್ನ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆರು ದಿನದ ಗಂಡು ಮಗುವನ್ನು ಅಪರಿಚಿತ ಮಹಿಳೆಯೊಬ್ಬಳು ಪೋಷಕರನ್ನು ಯಾಮಾರಿಸಿ ಅಪಹರಿಸಿದ್ದಳು. ಮಗುವಿನೊಂದಿಗೆ ಆಸ್ಪತ್ರೆಯಿಂದ ಹೊರಬಂದಿದ್ದ ಮಹಿಳೆ ಆಟೋ ಮೂಲಕ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳಿದ್ದಳು. ತಾನು ಹುಣಸೂರಿಗೆ ಹೋಗಬೇಕೆಂದು ಆಕೆ ಆಟೋ ಚಾಲಕನ ಬಳಿ ಹೇಳಿದ್ದಳು ಎನ್ನಲಾಗಿದೆ.

ಮಗು ಅಪಹರಣವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪಟ್ಟಣ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು. ಆಸ್ಪತ್ರೆ ಮುಂಭಾಗ ನಿಲ್ಲುವ ಆಟೋ ಚಾಲಕರಿಂದಲೂ ಮಾಹಿತಿ ಸಂಗ್ರಹಿಸಿದ್ದರು. ಆಟೋ ಚಾಲಕನೊಬ್ಬ ನೀಡಿದ ಸುಳಿವು ಬೆನ್ನತ್ತಿದ ಪೊಲೀಸರು ತಕ್ಷಣ ಮೈಸೂರು ಹಾಗು ಹುಣಸೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಹುಣಸೂರಿನಲ್ಲಿ ಬಸ್ ಇಳಿದು ಮಗುವಿನೊಂದಿಗೆ ಮನೆಗೆ ತೆರಳುತ್ತಿದ್ದ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಗುರಿಪಡಿಸಿದ್ದಾರೆ.  ತನಗೆ ಮಕ್ಕಳಾಗದ ಕಾರಣ ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಮಗು ಅಪಹರಿಸಿದ್ದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಚಾಮರಾಜನಗರ ಟೌನ್ ಇನ್ಸ್ಪೆಕ್ಟರ್ ನಾಗೇಗೌಡ  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News