ಹೊರ ರಾಜ್ಯಗಳಿಂದ ಬಂದವರಿಂದಲೆ ಕೊರೋನ ಸೋಂಕು ಹೆಚ್ಚಳ: ಜಗದೀಶ್ ಶೆಟ್ಟರ್

Update: 2020-06-17 17:37 GMT

ಧಾರವಾಡ, ಜೂ.17: ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೊರಗಿನಿಂದ ಬಂದವರಿಂದಲೆ ಈ ಸೋಂಕು ಹರಡುತ್ತಿದೆ. ಇದನ್ನು ನಿಯಂತ್ರಿಸಲು ಹೋಂ ಕ್ವಾರಂಟೈನ್ ಬಿಗಿಗೊಳಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಪ್ರತಿವಾರಕ್ಕೊಮ್ಮೆ ಸಭೆ ನಡೆಸುತ್ತಿದ್ದೇನೆ. ಕಿಮ್ಸ್ ಗೂ ಕೂಡ ಭೇಟಿ ನೀಡಿದ್ದೇನೆ. ಅಲ್ಲಿ ಮತ್ತೊಂದು ಲ್ಯಾಬ್ ಘಟಕ ಉದ್ಘಾಟನೆ ಮಾಡಲಾಗಿದೆ ಎಂದರು.

ಮೊದಲಿನಂತೆ ಈಗ ತಪಾಸಣಾ ವರದಿಗಳು ಬರುವುದು ತಡವಾಗುತ್ತಿಲ್ಲ. ಧಾರವಾಡ ಜಿಲ್ಲೆ ಅತೀ ಹೆಚ್ಚು ಜನರನ್ನು ಪರೀಕ್ಷೆಗೊಳಪಡಿಸಿದ ಜಿಲ್ಲೆಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಪಾಸಿಟಿವ್ ಕೇಸ್ ಬಂದ ಏರಿಯಾಗಳಲ್ಲಷ್ಟೇ ಲಾಕ್‍ಡೌನ್ ಮಾಡಲಾಗುತ್ತಿದೆ. ಜನ ಹೆದರುವ ಅಗತ್ಯವಿಲ್ಲ. ಆದರೆ, ಜಾಗೃತವಾಗಿರಬೇಕು ಎಂದು ಅವರು ಮನವಿ ಮಾಡಿದರು.

ನಾಳೆ ಹುಬ್ಬಳ್ಳಿಯಲ್ಲಿ ಮಾಸ್ಕ್ ಡೇ ಆಚರಣೆ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ ಪಾದಯಾತ್ರೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ. ಲ್ಯಾಂಡ್‍ಸೀಲಿಂಗ್ ಕಾಯ್ದೆ ಪ್ರಕಾರ ಒಂದು ಕುಟುಂಬಕ್ಕೆ 108 ಎಕರೆ ಭೂಮಿ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಈ ಮಿತಿಯು 58 ಎಕರೆ ಜಮೀನಿಗೆ ಸೀಮಿತವಾಗಿತ್ತು. ಇದರಿಂದ ಕೃಷಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದಾಗಿದೆ. ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕೆ ಪಡೆದು ಬಳಕೆಯಾಗದ ಜಮೀನುಗಳು ಮರಳಿ ಪಡೆಯಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News