ಹಿರಿಯ ಸಾಹಿತಿ ಎಂ.ಆರ್.ಮುಲ್ಲಾ ನಿಧನ
ಬೆಳಗಾವಿ, ಜೂ.18: ಬೈಲಹೊಂಗಲ ಪಟ್ಟಣದ ಮೌನೇಶ್ವರ ನಗರ ನಿವಾಸಿ, ಸಮಾಜ ಸೇವಕ, ಮಕ್ಕಳ ಸಾಹಿತಿ ಎಂ.ಆರ್.ಮುಲ್ಲಾ(84) ಅವರು ನಿಧನರಾದರು.
ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಮುಲ್ಲಾ ಅವರು 14 ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಸರಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ, ಕೇಂದ್ರದಿಂದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದ್ದರು.
ಪ್ರಿಯದರ್ಶಿನಿ ಕಾವ್ಯನಾಮದಿಂದ ಕವಿತೆಗಳನ್ನು ರಚಿಸಿದ್ದಾರೆ. ಆರಾಧನ ಪ್ರಬಂಧ ಸಂಕಲನ, ಬಯಲು ಬೆಳಗು-ಮಕ್ಕಳ ನೀತಿವಚನಗಳು, ಸ್ವಾತಂತ್ರ್ಯ ಯೋಧ ಬಸಪ್ಪ ಸಿದ್ನಾಳ ಜೀವನಚರಿತ್ರೆ ನಾಟಕ, ಕಥೆ, ಮಕ್ಕಳ ಕವಿತೆ, ವೈಚಾರಿಕ ಸಾಹಿತ್ಯ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.
ಬಸವದಳ ಹಾಗೂ ಜಾಮಿಯಾ ಮಸೀದಿ ಖಮರುಲ್ ಇಸ್ಲಾಂ ಸಮಿತಿ ಸದಸ್ಯರಾಗಿದ್ದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ(ತಾಲೂಕು) ಹಾಗೂ ಕಸಾಪ ತಾಲೂಕು ಘಟಕದ ಅಧ್ಯಕ್ಷರಾಗಿದ್ದರು.
ಈ ಭಾಗದ ಸರ್ವ ಧರ್ಮಗಳ ಮಠಾಧೀಶರು, ಗುರುಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. 6 ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ನೂರು ಗೌರವ ಸನ್ಮಾನಕ್ಕೆ ಭಾಜನವಾಗಿದ್ದರು. ಗೋಕಾಕ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.