ಮಡಿಕೇರಿ: ಗಾಂಜಾ ಮಾರಾಟ; ಆರು ಆರೋಪಿಗಳ ಬಂಧನ
ಮಡಿಕೇರಿ,ಜೂ.18: ಗಾಂಜಾ ದಂಧೆಕೋರರ ಬೇಟೆ ಮುಂದುವರಿಸಿರುವ ಕೊಡಗು ಜಿಲ್ಲಾ ಪೊಲೀಸರು, ಗಾಂಜಾ ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಪತ್ತೆಹಚ್ಚಿ ಆರು ಮಂದಿಯನ್ನು ಬಂಧಿಸಿದ್ದು, 5 ಕೆ.ಜಿ ಗಾಂಜಾ ಸಹಿತ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಮೈಸೂರು ನಗರದ ಹೆಬ್ಬಾಳ ನಿವಾಸಿ ಆನಂದ ಅಲಿಯಾಸ್ ಜ್ಞಾನಾನಂದ, ವೀರಾಜಪೇಟೆ. ಮೊಗರಗಲ್ಲಿ ನಿವಾಸಿ ಖಲೀಲ್, ಸೋಮವಾರಪೇಟೆ ತಾಲೂಕು ವಾಲ್ನೂರು ತ್ಯಾಗತ್ತೂರು ನಿವಾಸಿ ಕೆ.ಎಸ್. ಫರೀದ್, ಅಭ್ಯತ್ಮಂಗಲ ಗ್ರಾಮದ ನಿವಾಸಿಗಳಾದ ಹೆಚ್.ಎನ್. ನಿಖಿಲ್ ಮತ್ತು ಹೆಚ್.ಎಸ್. ಹರೀಶ್ ಹಾಗೂ ಚೇರಳ ಶ್ರೀಮಂಗಲದ ನಿವಾಸಿ ಕೆ.ಎನ್.ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ 5 ಕೆ.ಜಿ ಗಾಂಜಾ, ನಗದು, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಕಾರು, ಆಟೋರಿಕ್ಷಾ ಮತ್ತು ಒಂದು ಬೈಕ್ ಸಹಿತ ಒಟ್ಟು 8.50 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಅಮಾನತುಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚೆಟ್ಟಳ್ಳಿ ಉಪಠಾಣಾ ವ್ಯಾಪ್ತಿಯ ಚೆಟ್ಟಳ್ಳಿಯ ಫ್ರೌಡಶಾಲಾ ಮೈದಾನದ ಪಕ್ಕದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕ ಎನ್. ಕುಮಾರ್ ಆರಾಧ್ಯ ಮತ್ತು ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕ ಸಿ.ಎನ್. ದಿವಾಕರ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಅವರು ಹೇಳಿದರು.
ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕ ಸಿ.ಎನ್ ದಿವಾಕರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹೆಚ್.ವಿ ಚಂದ್ರಶೇಖರ್, ಸದಾಶಿವ, ಮತ್ತು ಜಿಲ್ಲಾ ಅಪರಾಧ ವಿಭಾಗದ ನಿರೀಕ್ಷಕ ಎನ್. ಕುಮಾರ್ ಆರಾಧ್ಯ ಮತ್ತು ಸಿಬ್ಬಂದಿಯವರಾದ ಹಮೀದ್, ಅನಿಲ್, ಶರತ್ ರೈ, ನಿರಂಜನ್, ಯೋಗೇಶ್, ವಸಂತ, ವೆಂಕಟೇಶ್, ಶಶಿಕುಮಾರ್, ಮಡಿಕೇರಿ ಗ್ರಾಮಾಂತರ ಠಾಣೆಯ ಶ್ರೀಧರ್, ತೀರ್ಥಕುಮಾರ್, ಮಂಜುನಾಥ್, ಶಶಿಧರ್, ಪ್ರವೀಣ್ ಕುಮಾರ್, ನಾಗರಾಜು, ಶಶಿ ,ರಾಜೇಶ್ ಮತ್ತು ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಅವರು ಶ್ಲಾಘಿಸಿದರು.