×
Ad

ಸೂರ್ಯಗ್ರಹಣ: ಮಕ್ಕಳನ್ನು ಮಣ್ಣಿನಡಿ ಹೂತರೆ ಕಠಿಣ ಕ್ರಮ; ಕಲಬುರಗಿ ಡಿಸಿ ಶರತ್ ಎಚ್ಚರಿಕೆ

Update: 2020-06-20 18:30 IST

ಕಲಬುರಗಿ, ಜೂ.20: ರವಿವಾರ ಸಂಭವಿಸುವ ಸೂರ್ಯಗ್ರಹಣ ಸಮಯದಲ್ಲಿ ಜಿಲ್ಲೆಯಾದ್ಯಂತ ಮೂಢನಂಬಿಕೆಯಿಂದ ವಿಕಲಚೇತನ ಮಕ್ಕಳನ್ನು ಮಣ್ಣಿನಡಿ ಹೂಳದಂತೆ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿ ಸಾರ್ವಜನಿಕರು ವಿಕಲಚೇತನ ಮಕ್ಕಳನ್ನು ಮಣ್ಣಿನಡಿಯಲ್ಲಿ ಹೂತರೆ ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಎಚ್ಚರಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಅವೈಜ್ಞಾನಿಕವಾದ ಹೂಳುವ ರೂಢಿಯನ್ನು ಕೈಬಿಡಬೇಕು. ಕಳೆದ ವರ್ಷ ಕಲಬುರಗಿ ನಗರದ ತಾಜ ಸುಲ್ತಾನಪೂರದಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿದ್ದು, ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ರವಿವಾರ ನಡೆಯುವ ಸೂರ್ಯಗ್ರಹಣ ದಿನದಂದು ಯಾವುದೇ ಕಾರಣಕ್ಕೂ ಇದು ಮರುಕಳಿಸಬಾರದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ತಹಶೀಲ್ದಾರರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಇದೆಲ್ಲದರ ನಡುವೆ ಶನಿವಾರ ಜಿಲ್ಲೆಯಾದ್ಯಂತ ತಾಲೂಕು ಪ್ರದೇಶ, ಪಟ್ಟಣ, ಗ್ರಾಮಗಳಲ್ಲಿ ಮೂಢನಂಬಿಕೆಯ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮಕ್ಕಳಿಗೆ ಪ್ರತ್ಯೇಕ ಕೋಣೆ: ಇದೇ ಜೂನ್ 25 ರಿಂದ ಜುಲೈ 4ರ ವರೆಗೆ ನಡೆಯುವ ಎಸೆಸೆಲ್ಸಿ ಪರೀಕ್ಷೆಗೆ ಕಂಟೈನ್‌ಮೆಂಟ್ ಝೋನ್ ಮತ್ತು ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ವಿದ್ಯಾರ್ಥಿಗಳು ಹಾಜರಾದಲ್ಲಿ, ಅವರಿಗೆ ಪ್ರತ್ಯೇಕವಾದ ಕೋಣೆಯಲ್ಲಿ ಕೂರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಇದಕ್ಕಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ 2 ಕೋಣೆ ಕಾಯ್ದಿರಿಸಲಾಗಿದೆ ಎಂದು ಶರತ್ ಬಿ. ತಿಳಿಸಿದರು.

ಪರೀಕ್ಷೆಗೆ ಬರುವ ಎಲ್ಲಾ ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಧರಿಸುವಿಕೆ, ಥರ್ಮಲ್ ಸ್ಕ್ರೀನ್ ಸ್ಕ್ಯಾನಿಂಗ್ ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ಪರೀಕ್ಷಾ ಕ್ಳೆಂದ್ರದಲ್ಲಿ ಆರೋಗ್ಯ ತಂಡ ನಿಯೋಜಿಸಲಾಗುತ್ತದೆ. ಮುಂಜಾಗ್ರತವಾಗಿ ಎಲ್ಲಾ ಸಾರಿಗೆ ಬಸ್‌ಗಳನ್ನು ಸಹ ಸ್ಯಾನಿಟೈಸ್ ಮಾಡಲು ಸಾರಿಗೆ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ 2446 ಮಂದಿ: ಕೊರೋನ ಹಿನ್ನೆಲೆಯಲ್ಲಿ ವಿವಿಧ ರಾಜ್ಯದಿಂದ ಜಿಲ್ಲೆಗೆ ಇದುವರೆಗೆ ಆಗಮಿಸಿದ 43,127 ಮಂದಿಯ ಪೈಕಿ 40,680 ಜನರನ್ನು ಬಿಡುಗಡೆ ಮಾಡಲಾಗಿದ್ದು, ಈಗ 2,446 ಜನರು ಮಾತ್ರ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News