6 ವರ್ಷಗಳಲ್ಲಿ 500 ಬಿಲಿಯನ್ ಡಾಲರ್ ಗೆ ರಾಜ್ಯ ಜಿಡಿಪಿ, ಕೈಗಾರಿಕೋದ್ಯಮಿಗಳಿಗೆ ಸರ್ವ ಸಹಕಾರ

Update: 2020-06-20 17:42 GMT

ಬೆಂಗಳೂರು, ಜೂ.20: ಮುಂದಿನ 6 ವರ್ಷಗಳಲ್ಲಿ ಕರ್ನಾಟಕವನ್ನು ‘ನವ ಕರ್ನಾಟಕ’ವನ್ನಾಗಿ ರೂಪಿಸುವುದೂ ಸೇರಿದಂತೆ, ರಾಜ್ಯದ ಜಿಡಿಪಿಯನ್ನು 230 ಬಿಲಿಯನ್ ಡಾಲರಿನಿಂದ 500 ಬಿಲಿಯನ್ ಡಾಲರಿಗೆ ಹೆಚ್ಚಿಸುವ ಉದ್ದಿಮೆದಾರರ ಕನಸಿಗೆ ಸರಕಾರ ಸರ್ವರೀತಿಯ ಸಹಕಾರ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಆಶ್ವಥ್ ನಾರಾಯಣ ಹೇಳಿದರು.

ಶನಿವಾರ ನಗರದಲ್ಲಿ ‘ಕೋವಿಡ್-19 ನಂತರ ಆರ್ಥಿಕತೆಯ ಪುನರುತ್ಥಾನ ಹಾಗೂ ನವ ಕರ್ನಾಟಕ ನಿರ್ಮಾಣ’ ವಿಷಯದ ಬಗ್ಗೆ ಅಸೋಚೋಮ್ ಏರ್ಪಡಿಸಿದ್ದ ವೆಬಿನಾರ್ ನಲ್ಲಿ ಉದ್ದಿಮೆದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೋವಿಡ್ ನಂತರ ಕರ್ನಾಟಕವನ್ನು ಆರ್ಥಿಕವಾಗಿ, ಕೈಗಾರಿಕೀಕರಣವಾಗಿ ಹೊಸದಾಗಿ ಕಟ್ಟಬೇಕಿದೆ. ಈ ನಿಟ್ಟಿನಲ್ಲಿ ಸರಕಾರವು ಉದ್ದಿಮೆದಾರರ ಜತೆ ಗಟ್ಟಿಯಾಗಿ ನಿಲ್ಲಲಿದೆ, ಕೈಗಾರಿಕೆಗಳಿಗೆ ಬೇಕಾದ ಸರ್ವರೀತಿಯ ಪೂರಕ ವಾತಾವರಣವನ್ನು ಸೃಷ್ಟಿ ಮಾಡಲಿದೆ ಎಂದು ಅವರು ಹೇಳಿದರು.

ಯಾರೇ ಬಂದು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಕ್ತ ಅವಕಾಶವಿದೆ. ಹೂಡಿಕೆ ಮಾಡಿದ ನಂತರ ಸರಕಾರದ ಅನುಮತಿ ಕೇಳಿದರೂ ಅಭ್ಯಂತರವಿಲ್ಲ. ಉದ್ಯೋಗಾವಕಾಶ ಸೃಷ್ಟಿ ಮಾಡುವ ಕೈಗಾರಿಕೋದ್ಯಮಕ್ಕೆ ಬೇಕಾದ ಎಲ್ಲ ಸೌಲಭ್ಯ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯವನ್ನು ಕೋವಿಡ್ ತುಂಬಾ ಬಾಧಿಸಿದೆ. ಸಾಮಾಜಿಕ, ಆರ್ಥಿಕ, ಕೈಗಾರಿಕೆ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಅನೇಕ ಬದಲಾವಣೆಗಳಿಗೆ ಕಾರಣವಾಗಿದೆ. ಸಮಸ್ಯೆಗಳನ್ನು ಸೃಷ್ಟಿಸಿದೆ. ಹೊಸಹೊಸ ಸವಾಲುಗಳು ಎದುರಾಗಿವೆ. ಇವೆಲ್ಲವನ್ನು ಸಮರ್ಥವಾಗಿ ಎದುರಿಸಲು ಸರಕಾರಕ್ಕೆ ಉದ್ದಿಮೆದಾರರ ಸಹಕಾರ ಅಗತ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ನುಡಿದರು.

ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ನಮ್ಮ ಸರಕಾರ ಕೆಲಸ ಮಾಡುತ್ತಿದೆ. ‘ಕನಿಷ್ಠ ಸರಕಾರ, ಗರಿಷ್ಠ ಆಡಳಿತ’ ಎಂಬ ಪ್ರಧಾನಿಯ ಮಂತ್ರವನ್ನು ನಾವು ಪಾಲಿಸುತ್ತಿದ್ದೇವೆ. ಈ ಮೂಲಕ ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳನ್ನು ಮುನ್ನಡೆಸುವುದು ನಮ್ಮ ಧ್ಯೇಯವಾಗಿದೆ. ಹೀಗಾಗಿ ಮೂರೂ ಕ್ಷೇತ್ರಗಳಿಗೂ ನಾವು ಹೂಡಿಕೆಗೆ ಮುಕ್ತ ಅವಕಾಶ ನೀಡಿದ್ದೇವೆ ಎಂದು ಅವರು ಹೇಳಿದರು.

ಅಲ್ಲದೆ, ಕೈಗಾರಿಕೆಗಳ ಸ್ಥಾಪನೆ, ಹೊಸ ವ್ಯವಹಾರ ಆರಂಭಕ್ಕಿರುವ ಅಡೆತಡೆಗಳನ್ನು ನಿವಾರಿಸುತ್ತಿದ್ದೇವೆ ಹಾಗೂ ಎಲ್ಲ ಅನುಮತಿಗಳನ್ನು ಕ್ಷಿಪ್ರಗತಿಯಲ್ಲಿ ನೀಡುತ್ತಿದ್ದೇವೆ, ಈ ನಿಟ್ಟಿನಲ್ಲಿ ಎಲ್ಲ ಪ್ರಕ್ರಿಯೆಗಳು ಚುರುಕಾಗಿ ಆರಂಭವಾಗಿವೆ ಎಂದು ಅವರು ತಿಳಿಸಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಕೈಗಾರಿಕೆಗಳಿಗೆ ಹೆಚ್ಚು ಒತ್ತಾಸೆ ನೀಡಬೇಕು ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಆಶಯವಾಗಿದೆ. ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಯಿತು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಯಿತಲ್ಲದೆ, ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿದ್ದ ಕೆಲ ಪಟ್ಟಭದ್ರರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕೊನೆಗಾಣಿಸಲಾಯಿತು ಎಂದು ಅವರು ಹೇಳಿದರು. ರೈತರು ತಾವು ಬೆಳೆದ ಬೆಳೆಯನ್ನು ಯಾರಿಗೆ ಬೇಕಾದರೂ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಉತ್ತಮ ಬೆಲೆ ಪಡೆಯಬಹುದು. ಇದು ನಮ್ಮ ಸರಕಾರ ಇಟ್ಟ ಪ್ರಮುಖ ಹೆಜ್ಜೆಯಾಗಿದೆ. ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸರಕಾರ ಜನರಿಗೆ ತಿಳಿವಳಿಕೆ ಮೂಡಿಸುತ್ತಿದೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.

ಮುಖ್ಯವಾಗಿ ರೈತರಿಗೆ ಭೂಮಿ, ನೀರು, ಗೊಬ್ಬರ ಇತ್ಯಾದಿಗಳನ್ನು ಸದ್ಭಳಕೆ ಮಾಡಿಕೊಳ್ಳುವುದಕ್ಕೆ ಬೇಕಾದ ಸಮಗ್ರ ಮಾಹಿತಿಯನ್ನು ಒದಗಿಸಲಾಗುತ್ತಿದೆ. ರೈತರಿಗೆ ಸಕಾಲಕ್ಕೆ ಉತ್ತಮ ಜ್ಞಾನ ನೀಡುವುದು ಅತಿ ಮುಖ್ಯ. ಇದರಿಂದ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಗುರುತರ ಬದಲಾವಣೆಗಳು ಆಗುತ್ತವೆ ಎಂದು ಅವರು ಹೇಳಿದರು.

ಐಟಿ ಬಿಟಿ ಸೇರಿದಂತೆ ಯಾವುದೇ ಕೈಗಾರಿಕೆ ಇರಲಿ ಕರ್ನಾಟಕದಷ್ಟು ಪ್ರಶಸ್ತ್ಯವಾದ ರಾಜ್ಯ ಮತ್ತೊಂದಿಲ್ಲ. ಕೊರೋನದಂಥ ಮಾರಿಯನ್ನು ಹಿಮ್ಮೆಟ್ಟಿಸಿ ಉದ್ದಿಮೆಗಳನ್ನು ಪುನರುಜ್ಜೀವನಗೊಳಿಸಲು ಉದ್ದಿಮೆದಾರರು ಇಡುತ್ತಿರುವ ಹೆಜ್ಜೆಗಳು ಶ್ಲಾಘನೀಯ. ಈ ನಿಟ್ಟಿನಲ್ಲಿ ಎಲ್ಲರಿಗೂ ಸ್ಫೂರ್ತಿಯಾದ ಕೈಗಾರಿಕೋದ್ಯಮಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಹೆಚ್ಚು ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಗಾರ್ಮೆಂಟ್ ಉದ್ಯಮಕ್ಕೆ ಸರಕಾರ ಹೆಚ್ಚು ಒತ್ತಾಸೆ ನೀಡುವುದರ ಜತೆಗೆ ಉತ್ತಮ ರಿಯಾಯಿತಿಗಳನ್ನು ನೀಡುತ್ತಿದೆ. ಬೆಂಗಳೂರು ಮಾತ್ರವಲ್ಲದೆ ಅತ್ಯುತ್ತಮ ಮಾನವ ಸಂಪನ್ಮೂಲ ಇರುವ ಗ್ರಾಮೀಣ, ಹಿಂದುಳಿದ ಪ್ರದೇಶಗಳಲ್ಲಿ ಸ್ಥಾಪನೆ ಮಾಡಿದರೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಆವರು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News