ಎಸೆಸೆಲ್ಸಿ ಪರೀಕ್ಷೆ ಮುಂದೂಡುವಂತೆ ಕ್ಯಾಂಪಸ್ ಫ್ರಂಟ್ ಆಗ್ರಹ

Update: 2020-06-21 16:43 GMT

ಬೆಂಗಳೂರು, ಜೂ.21: ರಾಜ್ಯದಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಲಾಕ್‍ಡೌನ್‍ನ ನಂತರ ಜನರು ಸಹಜ ಸ್ಥಿತಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ. ಸರಕಾರವು ಜನರಿಗೆ ಸ್ಪಷ್ಟ ನಿರ್ದೇಶನವನ್ನು ನೀಡುತ್ತಿಲ್ಲ ಎಂದು ಕ್ಯಾಂಪಸ್ ಫ್ರಂಟ್ ಆಕ್ರೋಶ ವ್ಯಕ್ತಪಡಿಸಿದೆ.

ಇನ್ನೊಂದೆಡೆ ಜನರು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಲು ವಿಫಲವಾಗುತ್ತಿದ್ದಾರೆ. ಈ ಮಧ್ಯೆ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವಿಚಾರದಲ್ಲಿ ಗೊಂದಲದಲ್ಲಿದ್ದಾರೆ. ಅಲ್ಲದೇ ಈ ಕೋವಿಡ್ ಮಧ್ಯೆ ಮುಂಬರುವ ಎಸೆಸೆಲ್ಸಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕದಲ್ಲಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ವರ್ಷ ಒಟ್ಟು 8.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಎಲ್ಲರೂ ಕೊರೋನ ಭೀತಿಯನ್ನು ಎದುರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗಿ ಹಬ್ಬುತ್ತಿದ್ದು, ದೇಶದಲ್ಲಿ ಇಂದು ಸುಮಾರು ನಾಲ್ಕು ಲಕ್ಷದ ಹತ್ತಿರ ಸೋಂಕಿತರ ಸಂಖ್ಯೆ ತಲುಪುತ್ತಿದೆ. ರಾಜ್ಯದಲ್ಲಿ 125 ಮಂದಿ ಬಲಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೊರೋನ ಮುಂಜಾಗೃತ ಕ್ರಮವಾಗಿ ಕೇಂದ್ರ ಸರಕಾರವು ಆರಂಭದಿಂದಲೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಮುಂದಿನ ಆದೇಶದವರೆಗೆ ತರಗತಿ ಆರಂಭಿಸುವಂತಿಲ್ಲ ಎಂದು ಕೇಂದ್ರ ಸರಕಾರ ಸೂಚಿಸಿದೆ. ಇಂತಹ ಸಂಧರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆ ಜೂ.25 ರಿಂದ ಜು.4ರವರೆಗೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿರುವುದನ್ನು ಮರು ಪರಿಶೀಲಿಸಬೇಕೆಂದು ಫಯಾಝ್ ದೊಡ್ಡಮನೆ ಆಗ್ರಹಿಸಿದ್ದಾರೆ.

ವಿದ್ಯಾಥಿಗಳಿಗೆ ಕೊರೋನ ವೈರಸ್ ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಇಲ್ಲಿಯವರೆಗೆ ಪೋಷಕರು ಕೈಗೊಂಡಿದ್ದು, ಅಲ್ಲದೇ ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಇರಿಸುವ ಬಗ್ಗೆ ಹಲವು ಪೋಷಕರು ಈಗಾಗಲೆ ನಿರ್ಧಾರ ತೆಗೆದಿದ್ದಾರೆ. ಇಂತಹ ಗೊಂದಲಮಯ ವಾತಾವರಣದಲ್ಲಿ ಸರಕಾರ ವಿದ್ಯಾರ್ಥಿಗಳ ಪೋಷಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಎಸೆಸೆಲ್ಲಿ ಪರೀಕ್ಷೆ ಬರೆಯಲು ವಿವಿದ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರಲಿದ್ದು, ಗಡಿ ಪ್ರದೇಶಗಳಲ್ಲಿ ಅಂತರ್‍ರಾಜ್ಯದ ಅಭ್ಯರ್ಥಿಗಳು ಕೂಡಾ ಪರೀಕ್ಷೆ ಬರೆಯಲು ಬರಲಿರುವ ಕಾರಣ ಸಾಮಾನ್ಯವಾಗಿ ಸುರಕ್ಷಿತ ಅಂತರ ಮತ್ತು ಸುರಕ್ಷತೆಯ ಕಡೆಗೆ ಗಮನಹರಿಸುವುದು ಬಿಟ್ಟು ವಿದ್ಯಾರ್ಥಿಗಳು ಪರೀಕ್ಷೆಯ ಗೊಂದಲದಲ್ಲಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಅಲ್ಲದೇ ಇತ್ತೀಚೆಗೆ ದ್ವಿತೀಯ ಪಿಯು ವಿಭಾಗದಲ್ಲಿ ಬಾಕಿಯಾಗಿದ್ದ ಇಂಗ್ಲಿಷ್ ಪರೀಕ್ಷೆಗೆ ರಾಜ್ಯದಲ್ಲಿ ಸುಮಾರು 27 ಸಾವಿರ ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದರು. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಕೋವಿಡ್‍ಗೆ ಹೆದರಿ ಗೈರಾಗಿದ್ದಾರೆ ಎಂದು ಮಾಧ್ಯಮ ವರದಿ ಮಾಡಿತ್ತು. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ಜೂ.25 ಕ್ಕೆ ನಿಗದಿಯಾಗಿರುವ ಎಸೆಸೆಲ್ಸಿ ಪರೀಕ್ಷೆಯನ್ನು ಶೀಘ್ರ ಮುಂದೂಡಿಸಿ ಆದೇಶ ಹೊರಡಿಸಬೇಕೆಂದು ಸರಕಾರಕ್ಕೆ ಫಯಾಝ್ ದೊಡ್ಡಮನೆ ಆಗ್ರಹಿಸಿದ್ದಾರೆ.

ಪ್ರಮುಖ ಬೇಡಿಕೆಗಳು: ಜೂ.25ಕ್ಕೆ ನಿಗದಿಯಾಗಿರುವ ಎಸೆಸೆಲ್ಸಿ ಪರೀಕ್ಷೆಯನ್ನು ಕೊರೋನ ಹಾವಳಿಯ ಪಾಸಿಟಿವ್ ಪ್ರಕರಣ ಸಂಖ್ಯಾ ಅನುಪಾತ ಇಳಿಮುಖವಾಗುವವರೆಗೂ ಮುಂದೂಡಬೇಕು.

ಪರೀಕ್ಷಾ ಸಂಬಂಧಿ ವಿಚಾರಗಳಲ್ಲಿ ವಿವಿಧ ರಾಜ್ಯಗಳು ಸ್ಥಳೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದು, ಶೀಘ್ರದಲ್ಲಿಯೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯ ಮಧ್ಯಪ್ರವೇಶಿಸಿ, ಏಕರೂಪ ತೀರ್ಮಾನ ಕೈಗೊಳ್ಳಬೇಕು.

ಎಸೆಸೆಲ್ಸಿ ಪರೀಕ್ಷೆಗೆ ನೋಂದಾವಣೆ ಮಾಡಿದಂತಹ 8.48 ಲಕ್ಷ ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಪರೀಕ್ಷೆ ಆರಂಭವಾಗುವವರೆಗೂ ಪರೀಕ್ಷಾರ್ಥಿಗಳ ಮೇಲೆ ವಿಶೇಷ ಕಾಳಜಿ ವಹಿಸಬೇಕು.

ಪರೀಕ್ಷೆಗೆ ಸಿದ್ಧರಾಗಿರುವ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿಕೆಯಿಂದ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದ್ದು, ಅವರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಶೀಘ್ರದಲ್ಲಿಯೆ ವೈಯಕ್ತಿಕ ಕೌನ್ಸಿಲಿಂಗ್‍ಗಳನ್ನು ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಫಯಾಝ್ ದೊಡ್ಡಮನೆ ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News