ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಚಂದ್ರಶೇಖರ್, ಅಕ್ಕಮಹಾದೇವಿ ಪ್ರಶಸ್ತಿಗೆ ಡಾ.ಜಯಶ್ರೀದಂಡೆ ಆಯ್ಕೆ
Update: 2020-06-23 17:55 GMT
ಬೆಂಗಳೂರು, ಜೂ.23: ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2019-20ನೇ ಸಾಲಿನ ಸಾಹಿತ್ಯ-ಸಂಸ್ಕೃತಿ ವಿಭಾಗದಲ್ಲಿ ಕೊಡಮಾಡುವ ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಕನ್ನಡಪರ ಹೋರಾಟಗಾರ ರಾ.ನಂ.ಚಂದ್ರಶೇಖರ, ದಾನಚಿಂತಾಮಣಿ ಪ್ರಶಸ್ತಿಗೆ ಡಾ.ಚೂಡಾಮಣಿ ನಂದಗೋಪಾಲ್, ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಬೆಳಗಾವಿಯ ಪ್ರೊ.ಸಿದ್ದಣ್ಣ ಉತ್ನಾಳ್ ಹಾಗೂ ಅಕ್ಕಮಹಾದೇವಿ ಪ್ರಶಸ್ತಿಗೆ ಕಲಬುರಗಿಯ ಡಾ.ಜಯಶ್ರೀ ದಂಡೆ ಆಯ್ಕೆ ಆಗಿದ್ದಾರೆ.
ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಆಯ್ಕೆ ಸಮಿತಿಯ ಶಿಫಾರಸ್ಸನ್ನು ಅಂಗೀಕರಿಸಿ 2019-20ನೇ ಸಾಲಿನ ಸಾಹಿತ್ಯ-ಸಂಸ್ಕೃತಿ ವಿಭಾಗದ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಮಾಲತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.