×
Ad

ನೇಕಾರರ ನೆರವಿಗೆ ಧಾವಿಸುವಂತೆ ಸರಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

Update: 2020-06-24 22:10 IST

ಬೆಂಗಳೂರು, ಜೂ.24: ಕಳೆದ 15 ದಿನಗಳಿಂದ ಬೆಳಗಾವಿ, ದೊಡ್ಡಬಳ್ಳಾಪುರ, ಧಾರವಾಡ ಮುಂತಾದ ಕಡೆ 6 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆಘಾತಕಾರಿ ಮಾಹಿತಿ ಇದೆ. ಬಿಕ್ಕಟ್ಟಿನ ಆರಂಭ ಇದು. ದುಡಿದು ಬದುಕುವ ಇಂತಹ ಸಮುದಾಯಗಳ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ, ಇದು ಸರಕಾರದ ವೈಫಲ್ಯದ ನೇರ ಫಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಬುಧವಾರ ಪತ್ರ ಬರೆದಿರುವ ಅವರು, ನೇಕಾರರಿಗೆ ರಾಜ್ಯ ಸರಕಾರವು ಇದುವರೆವಿಗೂ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಕೇಂದ್ರದ ಆತ್ಮನಿರ್ಭರತೆ ಯಾಕೊ ಜನರ ಕಣ್ಣಿಗೆ ಬರ್ಬರವಾಗಿ ಕಾಣುತ್ತಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಘೋಷಣೆಗಳು ಜನರ ಪಾಲಿಗೆ ಬರೀ ಬಾಯಿ ಮಾತಿನ ಘೋಷಣೆ ಮತ್ತು ಪೊಳ್ಳು ಘೋಷಣೆಯಂತೆ ಕಾಣುತ್ತಿವೆ ಎಂದು ತಿಳಿಸಿದ್ದಾರೆ.

ಸರಕಾರದ ಯೋಜನೆಗಳ ಫಲ ನಿಜವಾಗಿಯೂ ಜನರನ್ನು ತಲುಪಿಲ್ಲ. ಜನರಲ್ಲಿ ಆತ್ಮ ವಿಶ್ವಾಸ ಹುಟ್ಟಿಸಿಲ್ಲ ಎಂಬುದಕ್ಕೆ ಕಳೆದ 15 ದಿನಗಳಿಂದ ನೇಕಾರರು ಮಾಡಿಕೊಳ್ಳುತ್ತಿರುವ ಆತ್ಮಹತ್ಯೆಗಳೆ ಸಾಕ್ಷಿ. ಕೊರೋನ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯಗಳೆರಡೂ ಸಂಪೂರ್ಣ ವಿಫಲವಾಗಿವೆ. ಇದರಿಂದಾಗಿ, ಜನರ ಸಮಸ್ಯೆಗಳು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿವೆ ಎಂದು ಅವರು ಟೀಕಿಸಿದ್ದಾರೆ.

ನೇಕಾರರ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸುವ ಮೊದಲು ಅವರ ಸಂಕಷ್ಟಗಳನ್ನು ನಿವಾರಿಸಲು ರಚನಾತ್ಮಕವಾದ ಕಾರ್ಯಕ್ರಮಗಳನ್ನು ಶೀಘ್ರವಾಗಿ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕಳೆದ ಐದಾರು ತಿಂಗಳಿನಿಂದ ಸುಮಾರು 1 ಸಾವಿರ ಕೋಟಿ ರೂ.ಗಳ ಉತ್ಪನ್ನವನ್ನು ನೇಕಾರರು ಸಿದ್ಧಪಡಿಸಿದ್ದಾರೆ. ಇದರಲ್ಲಿ ಕೈ ಮಗ್ಗದಲ್ಲಿ ಉತ್ಪಾದಿಸಿದ ಬಟ್ಟೆಗಳ ಮೌಲ್ಯ ಸುಮಾರು 15 ಕೋಟಿ ರೂ.ಉಳಿದದ್ದು ವಿದ್ಯುತ್ ಮಗ್ಗಗಳಲ್ಲಿ ತಯಾರಿಸಿದ್ದು. ಇದನ್ನು ಸರಕಾರವೊಂದು ನಿಭಾಯಿಸುವುದಕ್ಕೆ ಯಾವ ಸಮಸ್ಯೆಯೂ ಇಲ್ಲ ಎಂದು ಅವರು ಹೇಳಿದ್ದಾರೆ.

ಅಂಗನವಾಡಿ ಕಾರ್ಯಕರ್ತರು, ಸರಕಾರಿ ನೌಕರರು, ಆಶಾ ಕಾರ್ಯಕರ್ತರು ಮತ್ತು ಪಡಿತರ ವ್ಯವಸ್ಥೆ ಮೂಲಕ ವಿತರಿಸಿ ನಿಭಾಯಿಸಬಹುದು. ಇದರಲ್ಲಿ ಕೆಲವು ರೀತಿಯ ಸೀರೆಗಳನ್ನು ಪಾಲಿಶಿಂಗ್ ಮುಂತಾದ ಪ್ರಕ್ರಿಯೆ ಮಾಡಿ ಪರಿಪೂರ್ಣಗೊಳಿಸಬೇಕಾಗುತ್ತದೆ. ಇಂಥದನ್ನು ಕೆಎಸ್‍ಐಸಿ ಹಾಗೂ ಎಂಎಸ್‍ಐಎಲ್, ಕೆಎಸ್‍ಟಿಐಡಿಸಿ ಅಥವಾ ಕೆಎಚ್‍ಡಿಸಿ ಮೂಲಕ ಖರೀದಿ ಮಾಡಿ ಮಾರುಕಟ್ಟೆ ಮಾಡುವ ಯೋಜನೆ ರೂಪಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನೇಕಾರರ ಸಂಕಷ್ಟಗಳನ್ನು ನೀಗಿಸಲು ಕೃಷಿ ಕ್ಷೇತ್ರದಲ್ಲಿ ಅನುಸರಿಸಲಾಗುತ್ತಿರುವ ಆವರ್ತ ನಿಧಿ ಪದ್ಧತಿಯನ್ನು ನೇಕಾರಿಕೆಗೂ ಅಳವಡಿಸಿ, ಬಿಕ್ಕಟ್ಟುಗಳು ಬಂದಾಗ ಉಪಯೋಗಿಸಲು ಕ್ರಮ ವಹಿಸಬೇಕು. ಹಾಗಾಗಿ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಶೀಘ್ರವಾಗಿ ಆವರ್ತ ನಿಧಿಯನ್ನು ಸ್ಥಾಪಿಸಿ ಉಪಯೋಗಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸರಕಾರ ಪ್ರತಿ ನೇಕಾರರ ಕುಟುಂಬಕ್ಕೆ 2 ಸಾವಿರ ರೂ.ನೀಡುವುದಾಗಿ ಘೋಷಿಸಿ ಎರಡು ತಿಂಗಳು ಕಳೆದರೂ ಇದುವರೆಗೆ ಒಂದೇ ಒಂದು ರೂಪಾಯಿ ನೇಕಾರರ ಕುಟುಂಬಗಳಿಗೆ ತಲುಪಿಲ್ಲ. ಅತ್ಯಂತ ತುರ್ತಾಗಿ ಹಣ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನೇಕಾರರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಕಳೆದ ಸಾಲಿನ ಆಗಸ್ಟ್ ರಿಂದ ಮಾರ್ಚ್ ವರೆಗೆ ಮನ್ನಾ ಮಾಡಿದ್ದು 4500 ಜನರ ಸುಮಾರು 18.05 ಕೋಟಿ ರೂ.ಮಾತ್ರ, ಎ.1ರಿಂದ ಈವರೆಗೆ ಕೇವಲ 6 ಸಾವಿರ ಜನರ 26 ಕೋಟಿ ರೂ. ಮನ್ನಾ ಮಾಡಲಾಗಿದೆ. ಆದುದರಿಂದ, ಶೀಘ್ರವಾಗಿ ಬಾಕಿ ಉಳಿದಿರುವ ಎಲ್ಲ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನೇಕಾರರು ಸೇರಿದಂತೆ ಪ್ರತಿ ಕುಟುಂಬಕ್ಕೆ ಕನಿಷ್ಠ 10 ಸಾವಿರ ರೂ.ಗಳನ್ನು ತುರ್ತಾಗಿ ನೀಡಬೇಕು ಮತ್ತು ಕೊರೋನ ಬಿಕ್ಕಟ್ಟು ಬಗೆಹರಿಯುವವರೆಗೆ ಉಚಿತವಾಗಿ ಆಹಾರ ಧಾನ್ಯಗಳ ಕಿಟ್‍ಗಳನ್ನು ನೀಡಿ ಸಂರಕ್ಷಿಸಬೇಕು. ನೇಕಾರರು ತಯಾರಿಸಿದ ಉತ್ಪನ್ನಗಳನ್ನು ಆಧರಿಸಿ ಅವುಗಳ ಮೇಲೆ ಸಾಲ ಸೌಲಭ್ಯವನ್ನು ತುರ್ತಾಗಿ ಕಲ್ಪಿಸಿ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಅವರು ಕೋರಿದ್ದಾರೆ.

ವಿದ್ಯುತ್ ಶುಲ್ಕವನ್ನು  ಕೂಡಲೆ ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಬೇಕು ಮತ್ತು ಛಿದ್ರಗೊಂಡಿರುವ ತಮ್ಮ ಬದುಕನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ನೇಕಾರರಿಗೆ ಸಹಕಾರಿ ಮತ್ತು ಇನ್ನಿತರೆ ಬ್ಯಾಂಕುಗಳ ಮೂಲಕ ಸುಲಭವಾಗಿ ಸಾಲ ಸಿಗುವಂತೆ ಮಾಡಬೇಕು. ಕಚ್ಚಾ ವಸ್ತುಗಳು ಸುಲಭ ದರದಲ್ಲಿ ಕೈಗೆಟುಕುವಂತೆ ಮಾಡಬೇಕು ಮತ್ತು ಜಿಎಸ್‍ಟಿ ಮುಂತಾದವುಗಳ ಬಾಕಿ ಮೊತ್ತದ ವಸೂಲಾತಿಯನ್ನು ಸಂಪೂರ್ಣವಾಗಿ ಸಮಸ್ಯೆ ಬಗೆಹರಿಯುವವರೆಗೆ ಕೈ ಬಿಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News