ಚಿಕ್ಕಮಗಳೂರು: ಗೊಂದಲಗಳಿಲ್ಲದೇ ಮೊದಲ ದಿನದ ಪರೀಕ್ಷೆ ಬರೆದ ಎಸೆಸೆಲ್ಸಿ ವಿದ್ಯಾರ್ಥಿಗಳು

Update: 2020-06-25 17:21 GMT

ಚಿಕ್ಕಮಗಳೂರು, ಜೂ.25: ಕೊರೋನ ವೈರಸ್ ಭೀತಿಯ ನಡುವೆಯೂ ಕಾಫಿನಾಡಿನಲ್ಲಿ ಗುರುವಾರ ಎಸೆಸೆಲ್ಸಿ ಪರೀಕ್ಷೆ ಯಾವುದೇ ಆತಂಕವಿಲ್ಲದೇ ನಡೆದಿದೆ. ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಯಲ್ಲಿ ತೆರೆಯಲಾಗಿರುವ 58 ಪರೀಕ್ಷಾ ಕೇಂದ್ರಗಳಲ್ಲಿ 12,262 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರ ಹೊರತಾಗಿ ಗುರುವಾರದ ಇಂಗ್ಲಿಷ್ ವಿಷಯದ ಪರೀಕ್ಷೆಗೆ ಜಿಲ್ಲೆಯಾದ್ಯಂತ 1,123 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. . 

ಕೊರೋನ ಸೋಂಕು ಭೀತಿ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಬುಧವಾರ ಪರೀಕ್ಷಾ ಸಿಬ್ಬಂದಿಗೆ ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಮಾದರಿ ಪರೀಕ್ಷಾ ಅಣಕು ಪ್ರದರ್ಶನವನ್ನೂ ನಡೆಸಲಾಗಿತ್ತು. ಪರೀಕ್ಷಾ ಕೇಂದ್ರದ ಪ್ರತೀ ಕೊಠಡಿಗೂ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಗುರುವಾರ ಜಿಲ್ಲೆಯ 58 ಪರೀಕ್ಷಾ ಕೇಂದ್ರಗಳಿಗೂ ಶಿಕ್ಷಣ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ ಗುರುವಾರ ಬೆಳಗ್ಗೆ 7:30ರಿಂದ 8ರ ಒಳಗೆ ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ ಸಲಕ ಸಿದ್ಧತೆಗಳನ್ನು ನಡೆಸಿಕೊಂಡರು. ಬೆಳಗ್ಗೆ 10:30ಕ್ಕೆ ಆರಂಭವಾದ ಆಂಗ್ಲಭಾಷೆ ಪರೀಕ್ಷೆಗೆ ಜಿಲ್ಲಾದ್ಯಂತ 13,924 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 58 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. 13,924 ವಿದ್ಯಾರ್ಥಿಗಳ ಪೈಕಿ 12,265 ವಿದ್ಯಾರ್ಥಿಗಳು ಮೊದಲ ದಿನದ ಆಂಗ್ಲಭಾಷೆ ಪರೀಕ್ಷೆಯನ್ನು ಯಾವುದೇ ಭಯಭೀತಿಯಿಲ್ಲದೇ ಪರೀಕ್ಷೆ ಎದುರಿಸಿದ್ದು, 1,123 ವಿದ್ಯಾರ್ಥಿಗಳು ಗೈರು ಹಾಜರಾಗಿರುವುದು ವರದಿಯಾಗಿದೆ.

ಪ್ರತೀ ಪರೀಕ್ಷಾ ಕೇಂದ್ರದಲ್ಲೂ ಬೆಳಗ್ಗೆ 8ರ ನಂತರ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಂತೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಹಾಕಲಾಗಿದ್ದ ಬಾಕ್ಸ್ ಮಾರ್ಕ್‍ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸ್ಯಾನಿಟೈಸರ್ ನೀಡಿದರು. ನಂತರ ಥರ್ಮಲ್ ಸ್ಕ್ಯಾನಿಂಗ್ ಒಳಪಡಿಸಿ ಮಾಸ್ಕ್ ಧರಿಸಿದ ನಂತರವೇ ಪರೀಕ್ಷಾ ಕೊಠಡಿಯೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು.  

ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಸಿ ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳನ್ನು ಮುಂಚಿತವಾಗಿಯೇ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಒಂದು ಮೀಟರ್ ಅಂತರದಲ್ಲಿ ಹಾಕಲಾಗಿದ್ದ ಡೆಸ್ಕ್ ಗಳಲ್ಲಿ ವಿದ್ಯಾರ್ಥಿಗಳು ಆಸೀನರಾಗಲು ಕೊಠಡಿ ಮೇಲ್ವಿಚಾರಕರು ಅನುವು ಮಾಡಿಕೊಟ್ಟರು. ಬೆಳಗ್ಗೆ 10:30ಕ್ಕೆ ಮಧ್ಯಾಹ್ನ 1:30ರ ವರೆಗೂ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆದರು.

ಕೊರೋನ ಸೋಂಕು ಪತ್ತೆಯಾಗಿ ಕಂಟೈನ್‍ಮೆಂಟ್ ಪ್ರದೇಶವೆಂದು ಗುರುತಿಸಿ ಕೊಂಡಿರುವ ಬೀರೂರಿನ ನಾಲ್ಕು ವಿದ್ಯಾರ್ಥಿಗಳು ಹಾಗೂ ಕಡೂರಿನ ಆರು ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದರೆ, ಅನಾರೋಗ್ಯದ ಕಾರಣದಿಂದ ಬೀರೂರಿನಲ್ಲಿ ಇಬ್ಬರು, ಕಡೂರಿನಲ್ಲಿ ಎಂಟು, ಕೊಪ್ಪದಲ್ಲಿ ಇಬ್ಬರು, ಶೃಂಗೇರಿಯಲ್ಲಿ ಮೂವರು ಸೇರಿದಂತೆ ಹದಿನೈದು ವಿದ್ಯಾರ್ಥಿಗಳು ತೆರೆಯಲಾಗಿದ್ದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದರು. 

ಜಿಲ್ಲೆಯಲ್ಲಿ 554 ವಲಸೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಬೀರೂರಿನಲ್ಲಿ 65, ಚಿಕ್ಕಮಗಳೂರಿನಲ್ಲಿ 141, ಕಡೂರಿನಲ್ಲಿ 116, ಕೊಪ್ಪದಲ್ಲಿ 18, ಮೂಡಿಗೆರೆಯಲ್ಲಿ 86, ಎನ್.ಆರ್.ಪುರದಲ್ಲಿ 27, ಶೃಂಗೇರಿ 10, ಹಾಗೂ ತರೀಕೆರೆಯಲ್ಲಿ 89 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಚಿಕ್ಕಮಗಳೂರಿನಲ್ಲಿ ಒರ್ವ ಹಾಗೂ ಮೂಡಿಗೆರೆಯಲ್ಲಿ ಒರ್ವ ವಲಸೆ ವಿದ್ಯಾರ್ಥಿ ಗೈರು ಹಾಜರಾಗಿದ್ದರು. ಯಾವುದೇ ವಿದ್ಯಾರ್ಥಿ ಪರೀಕ್ಷಾ ಅಕ್ರಮದಲ್ಲಿ ತೊಡಗಿರುವುದು ವರದಿಯಾಗಿಲ್ಲ.

ಪಟ್ಟಣ, ನಗರ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಬರಲು ಸಹಕಾರಿಯಾಗುವಂತೆ ಜಿಲ್ಲಾಡಳಿತ ಕೆಎಸ್ಸಾರ್ಟಿಸಿ ಬಸ್‍ಗಳ ವ್ಯವಸ್ಥೆಯನ್ನೂ ಮಾಡಿತ್ತು. ಖಾಸಗಿ ಬಸ್ ಸೇವೆ ಜಿಲ್ಲೆಯಲ್ಲಿ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಖಾಸಗಿ ವಾಹನಗಳನ್ನೂ ಒದಗಿಸುವ ಮೂಲಕ ಜಿಲ್ಲಾಡಳಿತ ವಿದ್ಯಾರ್ಥಿಗಳು ಗೊಂದಲವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಿತ್ತು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಗುರುವಾರ ಆರಂಭವಾದ ಎಸೆಸೆಲ್ಸಿ ಪರೀಕ್ಷೆಗೆ 1123 ವಿದ್ಯಾರ್ಥಿಗಳು ಗೈರಾಗಿರುವುದನ್ನು ಹೊರತು ಪಡಿಸಿದರೆ ಬಹುತೇಕ ವಿದ್ಯಾರ್ಥಿಗಳು ನಿರಾತಂಕವಾಗಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ.

ಕೊರೋನ ಆತಂಕದಿಂದಾಗಿ ಮುಂದೂಡಲಾಗಿದ್ದ ಕಳೆದ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷೆಯನ್ನು ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬರೆಯುವಂತಾಗಿದ್ದು, ಪರೀಕ್ಷೆ ನಡೆಯುತ್ತದೋ ಇಲ್ಲವೋ ಎಂಬ ಗೊಂದಲದ ನಡುವೇ ಗುರುವಾರ ಆರಂಭವಾದ ಪರೀಕ್ಷೆ ಎಸೆಸೆಲ್ಸಿ ವಿದ್ಯಾರ್ಥಿಗಳ ಪಾಲಿಗೆ ವಿಶೇಷವಾಗಿತ್ತು. ಆತಂಕದ ನಡುವೆ ಪರೀಕ್ಷೆ ಬರೆಯಲು ಬಂದಿದ್ದ ಎಸೆಸೆಲ್ಸಿ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಇಲಾಖಾಧಿಕಾರಿಗಳು, ಶಿಕ್ಷಕರು ಕೆಲ ಪರೀಕ್ಷಾ ಕೇಂದ್ರದ ಗೇಟ್‍ನಲ್ಲಿ ತಳಿರು ತೋರಣ ಕಟ್ಟಿ, ಪರೀಕ್ಷೆಗೆ ಶುಭಕೋರಿ ಪೋಸ್ಟರ್, ಬ್ಯಾನರ್ ಹಾಕಿದ್ದ ದೃಶ್ಯಗಳು ನಗರದ ಕೆಲವೆಡೆ ಕಂಡುಬಂದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News