ಯಡಿಯೂರಪ್ಪನವರೇ, ಮಾತಿಗೆ ತಪ್ಪಿದ ನಾಯಕನಾಗಬೇಡಿ: ಎಚ್.ವಿಶ್ವನಾಥ್

Update: 2020-06-28 11:47 GMT

ಮೈಸೂರು,ಜೂ.28: ಈ ನಾಡಿನಲ್ಲಿ ನಾಲಗೆ ಮೇಲೆ ನಿಂತ ನಾಯಕ ಯಡಿಯೂರಪ್ಪ, ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಯಡಿಯೂರಪ್ಪನವರೆ ಮಾತಿಗೆ ತಪ್ಪಿದ ನಾಯಕನಾಗಬೇಡಿ, ಮಾತು ತಪ್ಪಿ ಅಪವಾದಕ್ಕೆ ಒಳಗಾಗಬೇಡಿ ಎಂದು ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.

ನಗರದ ರಾಜೇಂದ್ರ ಕಲಾಮಂದಿರದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವ್ಯಕ್ತಿ ಯಡಿಯರೂಪ್ಪ, ಈ ಮಾತಿಗೆ ನೀವು ಅಪವಾದ ಆಗಬೇಡಿ. ರಾಜ್ಯದಲ್ಲಿ ಮಾತಿನ ಮೇಲೆ ನಿಲ್ಲುವವರು ನೀವೊಬ್ಬರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ನಾನು ಕೇಳುತ್ತಿಲ್ಲ, ಕೊಡೋದು ನಿಮಗೆ ಬಿಟ್ಟ ವಿಚಾರ. ಆದರೆ ನನ್ನ ಅನುಭವ ಬಳಸಿಕೊಳ್ಳಿ ಎಂದು ಹೇಳುತ್ತಿದ್ದೇನೆ. ದೇಶದ ರಾಜಕಾರಣ ನಡೆಯೋದೆ ಭಾವನೆ ಮತ್ತು ನಂಬಿಕೆ ಮೇಲೆ. ಇವೆರಡು ಮುಗಿದು ಹೋದರೆ ರಾಜಕಾರಣ ಇರೋದಿಲ್ಲ. ಜನನಾಯಕರು ಭಾವನೆ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ. ಯಡಿಯೂರಪ್ಪನವರೇ ನೀವು ಮಾತು ತಪ್ಪದ ಮಗನಾಗಿ. ಮಾತು ತಪ್ಪಿದ ಮಗನಾಗಬೇಡಿ. ಯಡಿಯೂರಪ್ಪನವರೇ..ನಾಲಗೆ ಮೇಲೆ ನಿಂತ ನಾಯಕನಾಗಿ, ನಾಲಗೆ ಕಳೆದುಕೊಂಡ ನಾಯಕನಾಗಬೇಡಿ, ಇದು ಜನರ ಅಭಿಪ್ರಾಯ ಎಂದು ಹೇಳಿದರು.

ನನಗೆ ಎಂಎಲ್‍ಸಿ ಸ್ಥಾನ ಕೊಟ್ಟರೆ ನನ್ನ ವ್ಯಕ್ತಿತ್ವ ಮೇಲೂ ಹೋಗಲ್ಲ, ಕೆಳಗೂ ಇಳಿಯಲ್ಲ, ವಿಶ್ವನಾಥ್ ಹೇಗಿದ್ದರೂ ವಿಶ್ವನಾಥೆ. ನನ್ನ ಅನುಭವವನ್ನು ಉಪಯೋಗಿಸಿಕೊಳ್ಳಿ ಎಂದು ಪುನರುಚ್ಚರಿಸಿದರು.

ಮಾಜಿ ಸಚಿವ ಎಚ್.ವಿಶ್ವನಾಥ್ ಅಧ್ಯಾಯ ಮುಗಿಯಿತು ಎಂಬ ಶಾಸಕ ಸಾ.ರಾ.ಮಹೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರ್ಯಾರಿಗೋ ಉತ್ತರ ಕೊಡಬೇಕಿಲ್ಲ, ಅವರು ನನ್ನ ಸಮ ಅಲ್ಲ, ಅದೆಲ್ಲ ಗ್ರಾಮ ಪಂಚಾಯತ್ ಮಟ್ಟದವರು ಮಾತನಾಡೋದು. ಅದಕ್ಕೆ ನಾನು ಉತ್ತರ ಕೊಡಬೇಕಿಲ್ಲ ಎಂದು ವಿಶ್ವನಾಥ್ ತಿರುಗೇಟು ನೀಡಿದರು.

ನಾನು ಯಾವ ಪಕ್ಷದಲ್ಲೇ ಇದ್ದರೂ ಪಕ್ಷವನ್ನು ಪ್ರೀತಿ ಮಾಡುತ್ತೇನೆ. ಪಕ್ಷದ ನಾಯಕರಾದವರು ಸರಿಯಾಗಿ ನಡೆದುಕೊಳ್ಳಲಿಲ್ಲ ಎಂದರೆ ಅವರ ವಿರುದ್ಧವೇ ದಂಗೆ ಹೇಳುತ್ತೇನೆ. ಈ ಹಿಂದೆ ಬಂಗಾರಪ್ಪ, ವೀರಪ್ಪ ಮೊಯ್ಲಿ ಕಾಲದಲ್ಲಿ ಅಷ್ಟೇ ಏಕೆ ನಾವೇ ಕರೆತಂದ ಸಿದ್ದರಾಮಯ್ಯ ವಿರುದ್ಧ ದಂಗೆ ಎದ್ದವನು. ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ ವಿರುದ್ಧವೇ ದಂಗೆ ಎದ್ದವನು. ಹಾಗಾಗಿ ಬಾಂಬೆಯಲ್ಲಿ ನಡೆದ ಮಾತಿನಂತೆ ನೀವು ನಡೆದುಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಎಚ್ಚರಿಸಿದರು.

ಮುಂದೆ ನನ್ನ ಹಾದಿ ಸುಗಮವಾಗಿದೆ. ನನ್ನ 40 ವರ್ಷ ರಾಜಕಾರಣದಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ಡಿ.ದೇವರಾಜ ಅರಸು ಶಿಷ್ಯನಾಗಿ ಸಚಿವ ಸಂಪುಟದಲ್ಲಿ ಹಲವಾರು ಖಾತೆಗಳನ್ನು ನಿಭಾಯಿಸಿದ್ದೇನೆ. ಎಲ್ಲವನ್ನೂ ಪಾರದರ್ಶಕವಾಗಿ ಆಡಳಿತ ನಡೆಸಿದ್ದೇನೆ ಎಂದು ಹೇಳಿದರು.

ಬಾಂಬೆಯಲ್ಲಿ ನಡೆದ ಎಲ್ಲಾ ಘಟನಾವಳಿಗಳ ಕುರಿತು ಪುಸ್ತಕ ಬರೆಯಲು ಅಣಿಯಾಗುತ್ತಿದ್ದೇನೆ. ಈ ಪುಸ್ತಕಕ್ಕೆ “ಬಾಂಬೆ ಡೇಸ್” ಎಂಬ ಹೆಸರನ್ನು ಕೊಟ್ಟಿದ್ದೇನೆ. ಬಾಂಬೆಯಲ್ಲಿ ಏನೇನಾಯಿತು ಎಂಬುದನ್ನು ಪುಸ್ತಕದ ರೂಪದಲ್ಲಿ ಹೊರತರಲಿದ್ದೇನೆ. ಒಂದು ಸರ್ಕಾರ ಹೋಗಿ ಮತ್ತೊಂದು ಸರ್ಕಾರ ಬರಲೇಬೇಕಿದೆ. ಜನತಂತ್ರ ವ್ಯವಸ್ಥೆಯಲ್ಲಿ ಭಾವನೆ, ನಂಬಿಕೆ ಮೇಲಿನ ತಲ್ಲಣವೇನು ಎಂಬ ವಿಚಾರವನ್ನೆಲ್ಲ ಅಕ್ಷರದ ಮೂಲಕ ಜನರಿಗೆ ತಿಳಿಸುತ್ತೇನೆ. ಇದು ಮೂರು ಭಾಷೆಯಲ್ಲಿ ಬಿಡುಗಡೆ ಮಾಡಬೇಕೆಂದುಕೊಂಡಿದ್ದು, ದೆಹಲಿಯಲ್ಲಿ ಬಿಡುಗಡೆ ಮಾಡಲಿದ್ದೇನೆ ಎಂದು ಹೇಳಿದರು. 2006ರಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪ ಮಾಡಿದ್ದು ಕ್ಷಿಪ್ರ ಕ್ರಾಂತಿ, ನಾವು ಮಾಡಿದ್ದು ದ್ರೋಹದ ಕೆಲಸವಂತೆ ಎಂದು ವ್ಯಂಗ್ಯವಾಡಿದರು.

ನಾನು ಪುಸ್ತಕ ಬರೆಯುವುದರಿಂದ ಸರ್ಕಾರಕ್ಕೆ ತೊಂದರೆ ಇಲ್ಲ. 2006ರಲ್ಲಿ ರವಿ ಬೆಳೆಗೆರೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ವಿರುದ್ಧ ಪುಸ್ತಕ ಬರೆದಿದ್ದರು. ಇದು ಕ್ಷಿಪ್ರ ಕ್ರಾಂತಿ ಅಲ್ಲ ಎಂದು ಕಾಮರಾಜ ಮಾರ್ಗದಲ್ಲಿ ಬರೆದಿದ್ದಾರೆ. ಸುಮಾರು 70 ಪುಟಗಳಲ್ಲಿ ಯಾವ ಎಸ್ಟೇಟ್‍ಗೆ ಹೋಗಿದ್ದರು ಎಂಬ ಬಗ್ಗೆ ಎಲ್ಲವನ್ನು ಬರೆದಿದ್ದಾರೆ. ಈ ಬಗ್ಗೆ ಬರೆಯುವುದರಲ್ಲಿ ಯಾವುದೇ ತಪ್ಪಿಲ್ಲ, ಬರೆಯುವುದರಿಂದ ಸರ್ಕಾರಕ್ಕೆ ಏನು ಅಗಲ್ಲ. ಸರ್ಕಾರ ಗಟ್ಟಿಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News