×
Ad

ನಿಯಂತ್ರಣಕ್ಕೆ ಬಾರದ ಕೊರೋನ: ರಾಜ್ಯದಲ್ಲಿ ಒಂದೇ ದಿನ 1,267 ಮಂದಿಗೆ ಸೋಂಕು ದೃಢ, 16 ಸಾವು

Update: 2020-06-28 19:54 IST

ಬೆಂಗಳೂರು, ಜೂ.28: ಕರ್ನಾಟಕದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗುತ್ತಿದೆ. ಸೋಂಕಿತರು ಸಾವನ್ನಪ್ಪುತ್ತಿರುವ ಪ್ರಕರಣದಲ್ಲೂ ಏರಿಕೆಯಾಗುತ್ತಿದೆ. ಇದುವರೆಗಿನ ಪ್ರತಿದಿನದ ಕೊರೋನ ಪಾಸಿಟಿವ್ ಪ್ರಕರಣಗಳ ಪೈಕಿ ಇಂದು ಅತೀ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಶನಿವಾರ ಸಂಜೆಯಿಂದ ರವಿವಾರ ಸಂಜೆವರೆಗೆ ಮತ್ತೆ 1,267 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 13,190 ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ನಾಲ್ಕು, ದಕ್ಷಿಣ ಕನ್ನಡದಲ್ಲಿ ಮೂರು, ತುಮಕೂರು 2, ಬಾಗಲಕೋಟೆ 2, ಧಾರವಾಡ, ಹಾಸನ, ಮೈಸೂರು, ಬಳ್ಳಾರಿ, ಕಲಬುರಗಿಯಲ್ಲಿ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 207ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆಯ 66, 62, 65 ಮತ್ತು 55 ವರ್ಷದ ನಾಲ್ವರು ಪುರುಷರು, ದಕ್ಷಿಣ ಕನ್ನಡದ 48 ಮತ್ತು 51 ವರ್ಷದ ಇಬ್ಬರು ಮಹಿಳೆಯರು ಹಾಗೂ 31 ವರ್ಷದ ವ್ಯಕ್ತಿಯೊಬ್ಬರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ತುಮಕೂರಿನ 76 ವರ್ಷದ ಮಹಿಳೆ ಮತ್ತು 40 ವರ್ಷದ ಪುರುಷ, ಬಾಗಲಕೋಟೆಯ 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಉಳಿದಂತೆ ಧಾರವಾಡ, ಹಾಸನ, ಮೈಸೂರು, ಬಳ್ಳಾರಿ, ಕಲಬುರಗಿಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 783, ದಕ್ಷಿಣ ಕನ್ನಡ 97, ಬಳ್ಳಾರಿ 71, ಉಡುಪಿ 40, ಕಲಬುರಗಿ 34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ 27, ಮೈಸೂರು 18, ಧಾರವಾಡ 18, ಬಾಗಲಕೋಟೆ 17, ಉತ್ತರ ಕನ್ನಡ 14, ಹಾವೇರಿ 12, ಕೋಲಾರ 11, ಬೆಳಗಾವಿ 8, ಬೀದರ್ 7, ಚಿತ್ರದುರ್ಗ 7, ರಾಯಚೂರು 6, ಮಂಡ್ಯ 6, ದಾವಣಗೆರೆ 6, ವಿಜಯಪುರ 5, ಶಿವಮೊಗ್ಗ 4, ಕೊಡಗು 3, ಕೊಪ್ಪಳ 3, ಚಿಕ್ಕಮಗಳೂರು 3, ಚಿಕ್ಕಬಳ್ಳಾಪುರ 3, ತುಮಕೂರು 2 ಮತ್ತು ಯಾದಗಿರಿಯಲ್ಲಿ 1 ಪ್ರಕರಣ ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 13,190 ಕೊರೋನ ಸೋಂಕಿತರ ಪೈಕಿ 7,507 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 220 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 207 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 5,472 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News