ಕೊರೋನ ನಿಯಂತ್ರಣಕ್ಕಾಗಿ ಎರಡು ಕಾರ್ಯತಂಡಗಳನ್ನು ರಚಿಸಿದ ರಾಜ್ಯ ಸರಕಾರ

Update: 2020-06-28 18:15 GMT

ಬೆಂಗಳೂರು, ಜೂ.28: ನಗರದಲ್ಲಿ ಕೊರೋನ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಎರಡು ಹೊಸ ಕಾರ್ಯತಂಡಗಳನ್ನು ರಚಿಸಿ ಆದೇಶ ಹೊರಡಿಸಿದೆ.

ಕೊರೋನ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡಲು ಎರಡು ಹೊಸ ಕಾರ್ಯತಂಡವನ್ನು ರಚಿಸಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ನಗರದ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಜೋಡಿಸಲಾದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಮತ್ತು ಚಿಕಿತ್ಸೆಯ ವ್ಯವಸ್ಥೆ ಮತ್ತು ಕೊರೋನ ಆರೈಕೆ ಕೇಂದ್ರಗಳಿಗೆ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ವ್ಯವಸ್ಥೆ ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಯ ತಂಡವನ್ನು ರಚಿಸಲಾಗಿದೆ. ಈ ಕಾರ್ಯತಂಡದಲ್ಲಿ ಜಿಕೆವಿಕೆ ಉಪಕುಲಪತಿ ಡಾ.ಸಚ್ಚಿದಾನಂದ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ್, ಆಯುಷ್ ಇಲಾಖೆ ಆಯಕ್ತರಾದ ಮೀನಾಕ್ಷಿ ನೇಗಿ ಸದಸ್ಯರಾಗಿರಲಿದ್ದಾರೆ.

ಇನ್ನು ಎಲ್ಲಾ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವ್ಯವಸ್ಥೆ ಮಾಡಲು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಎನ್.ಜಯರಾಮ್ ನೇತೃತ್ವದಲ್ಲಿ ಕಾರ್ಯತಂಡವನ್ನು ರಚಿಸಲಾಗಿದೆ. ಈ ಕಾರ್ಯತಂಡದಲ್ಲಿ ಬೆಸ್ಕಾಂ ಎಂಡಿ ರಾಜೇಶ್ ಗೌಡ, ಬೆಂ.ನಗರ ಜಿಲ್ಲಾಧಿಕಾರಿ ಶಿವಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ಸಂಬಂಧಿತ ವಿಭಾಗದ ಡಿಸಿಪಿಗಳು, ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ, ಬೆಂಗಳೂ ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಸದಸ್ಯರಾಗಿರಲಿದ್ದಾರೆ. ಈ ಕಾರ್ಯತಂಡಗಳು ಪ್ರತಿನಿತ್ಯ ಬಿಬಿಎಂಪಿ ಆಯುಕ್ತರಿಗೆ ವರದಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News