ತುಮಕೂರು: ಕುರಿಗಾಹಿಗೆ ಕೊರೋನ ಸೋಂಕು; ಸುಮಾರು 50 ಕುರಿಗಳಿಗೆ ಕ್ವಾರಂಟೈನ್
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕುರಿಗಾಹಿ ಒಬ್ಬರಿಗೆ ಕೋರೋನ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಆತ ಕಾಯುತ್ತಿದ್ದ ಸುಮಾರು 50 ಕುರಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಿ ಅವುಗಳ ಗಂಟಲು ದ್ರವ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಿರುವ ಘಟನೆ ನಡೆದಿದೆ.
ಕುರಿಗಾಹಿಗೆ ಕೋವಿಡ್19 ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕುರಿಗಳನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ತೆಗೆದು ಪರೀಕ್ಷೆಗೆ ಒಳಪಡಿಸುವಂತೆ ಸೂಚನೆ ನೀಡಿದ್ದರು. ಇದಕ್ಕೆ ಪಶುವೈದ್ಯ ರು ಹಾಗು ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಪ್ರಾಣಿಗಳಿಂದ ಕೋರೋನ ಸೋಂಕು ಹರಡುವುದಿಲ್ಲ ಎಂದು ಪಶುವೈದ್ಯರು ಸ್ಪಷ್ಟ ಪಡಿಸಿದ್ದರು.
ಇಂದು ಕುರಿಗಳ ಗಂಟಲ ದ್ರವ ತೆಗೆದು ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಾಣಿಗಳ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿರುವುದು ಇದೆ ಮೊದಲಾಗಿದೆ. ಇದರ ವರದಿ ಬಗ್ಗೆ ರೈತರು, ಹೈನುಗಾರರು, ಪಶು ಪಾಲಕರು ಉತ್ಸುಕರಾಗಿದ್ದು, ಅದೇ ರೀತಿ ಆತಂಕಕ್ಕೆ ಒಳಗಾಗಿದ್ದಾರೆ.