ಎಸೆಸೆಲ್ಸಿ ಪರೀಕ್ಷೆ ಬಳಿಕ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳ ಜಾರಿಗೆ ಚಿಂತನೆ: ಸಚಿವ ಆರ್.ಅಶೋಕ್

Update: 2020-07-01 13:22 GMT

ಚಿಕ್ಕಮಗಳೂರು, ಜು.1: ಕೊರೋನ ವೈರಸ್ ಕೇವಲ ನಮ್ಮ ರಾಜ್ಯಕ್ಕೆ ಸೀಮಿತವಾಗಿಲ್ಲ. ಅದು ವಿಶ್ವವ್ಯಾಪಿ ರಾಕ್ಷಸನಾಗಿ ಕಾಡುತ್ತಿದೆ. ಈ ಚೀನಾ ವೈರಸ್ ಬೆಂಗಳೂರು ಹೊರತು ಪಡಿಸಿ ದೇಶದ ಮಹಾನಗರಗಳ ಜನಜೀವನವನ್ನು ಜರ್ಝರಿತಗೊಳಿಸಿದೆ. ಸೋಂಕು ಎಲ್ಲೆಡೆ ತೀವ್ರವಾಗಿ ಹರಡುತ್ತಿದೆಯಾದರೂ ಸದ್ಯಕ್ಕೆ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಚಿಂತನೆ ಸರಕಾರದ ಮುಂದಿಲ್ಲ. ಎಸೆಸೆಲ್ಸಿ ಪರೀಕ್ಷೆ ಮುಗಿದ ಬಳಿಕ ಈ ಸಂಬಂಧ ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಬುಧವಾರ ನಗರದ ಪವಿತ್ರವನ ಬಡಾವಣೆಯಲ್ಲಿ ನೆನೆಗುದಿಗೆ ಬಿದ್ದಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವನ್ನು ಪರಿಶೀಲಿಸಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಕೊರೋನ ವೈರಸ್ ದೇಶದಲ್ಲಿ ಇನ್ನೂ 3ರಿಂದ 6 ತಿಂಗಳು ಇರಲಿದೆ ಎನ್ನಲಾಗುತ್ತಿದೆ. ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರಕಾರ ಅಗತ್ಯ ಕ್ರಮಕೈಗೊಂಡಿದ್ದು, ವಿಪತ್ತು ನಿರ್ವಹಣಾ ನಿಧಿಯಿಂದ ಈಗಾಗಲೇ 382 ಕೋ. ರೂ. ಬಿಡುಗಡೆ ಮಾಡಲಾಗಿದೆ. ಈ ನಿಧಿಯಡಿಯಲ್ಲಿ ಇನ್ನೂ 300 ಕೋ. ರೂ.ನಷ್ಟು ಹಣ ಸರಕಾರದ ಬಳಿ ಇದೆ ಎಂದರು.

ಕೋರೋನ ಸೋಂಕು ವಿಶ್ವವ್ಯಾಪಿ ಹರಡಿರುವ ಸೋಂಕಾಗಿದೆ. ಲಾಕ್‍ಡೌನ್ ಮಾಡಿದರೂ ಸೋಂಕು ಹರಡುತ್ತದೆ, ಮಾಡದಿದ್ದರೂ ಹರಡುತ್ತದೆ. ಈ ಸೋಂಕು ತಕ್ಷಣಕ್ಕೆ ಹೋಗುವ ಸೋಂಕಲ್ಲ. ಸೋಂಕು ನಿವಾರಣೆಗೆ ಸರಕಾರೂಂದಿಗೆ ಜನರು ಕೈಜೋಡಿಸಬೇಕು ದಿಲ್ಲಿ, ಕಲ್ಕತ್ತ, ಚೆನ್ನೈ, ಮುಂಬೈಯಂತಹ ಮಹಾನಗರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಬೆಂಗಳೂರು ಮಹಾನಗರದಲ್ಲಿ ಸೋಂಕು ತೀವ್ರ ಪರಿಣಾಮ ಬೀರದಿರಲು ರಾಜ್ಯ ಸರಕಾರ ಕೈಗೊಂಡ ಪರಿಣಾಮಕಾರಿ ಕ್ರಮಗಳೇ ಕಾರಣವಾಗಿದೆ ಎಂದ ಅವರು, ಸೋಂಕು ಹರಡುತ್ತಿರುವ ಮಧ್ಯೆಯೇ ಸಾರ್ವಜನಿಕ ಸ್ಥಳ ಹಾಗೂ ಪಾರ್ಕಿಂಗ್ ಪ್ರದೇಶಗಳಲ್ಲಿ ಹೆಚ್ಚು ಜನರು ಸೇರುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಹೇರಬೇಕೆಂಬ ಸಲಹೆಗಳೂ ಬಂದಿವೆ. ಆದರೆ ಈ ಸಂಬಂಧ ಈಗಲೇ ತೀರ್ಮಾನ ಕೈಗೊಳ್ಳುವ ಚಿಂತನೆ ಸರಕಾರ ಮಾಡಿಲ್ಲ ಎಂದರು.

ರಾಜ್ಯದಲ್ಲಿ ಸದ್ಯ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಗಳು ಮುಗಿದ ಬಳಿಕ ಜು.7ರಂದು ಸರಕಾರ ಲಾಕ್‍ಡೌನ್ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಿದೆ. ಸದ್ಯಕ್ಕೆ ಪ್ರತೀ ರವಿವಾರ ಲಾಕ್‍ಡೌನ್ ಜಾರಿ ಮಾಡಿದ್ದು, ಪ್ರತೀ ಶನಿವಾರವೂ ಲಾಕ್‍ಡೌನ್ ಜಾರಿ ಮಾಡುವ ಚಿಂತನೆ ನಡೆದಿದೆ. ಎಸೆಸೆಲ್ಸಿ ಪರೀಕ್ಷೆ ಬಳಿಕ ಕೊರೋನ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ ಎಂದ ಅವರು, ಕೊರೋನ ಸೋಂಕು ನಿಯಂತ್ರಣಕ್ಕೆ ಸರಕಾರದ ಬಳಿ ಹಣವಿಲ್ಲ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಆರೋಪ ಸತ್ಯಕ್ಕೆ ದೂರವಾದದ್ದು. ರಾಜ್ಯ ಸರಕಾರದ ಖಜಾನೆ ಖಾಲಿಯಾಗಿಲ್ಲ. ಇಂತಹ ಆರೋಪಗಳಲ್ಲಿ ಹುರುಳಿಲ್ಲ. ಲಾಕ್‍ಡೌನ್ ಸಡಿಲಿಕೆ ಬಳಿಕ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಂಡಿದ್ದು, ಸಾರಿಗೆ, ಕಂದಾಯ, ಅಬಕಾರಿ ಇಲಾಖೆಯ ಮೂಲಗಳಿಂದ  ಸರಕಾರದ ಖಜಾನೆಗೆ ಹಣ ಬರುತ್ತಿದೆ. ಸರಕಾರದ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಎಲ್ಲ ಇಲಾಖೆಗಳ ಸಿಬ್ಬಂದಿ ವೇತನವನ್ನೂ ಸರಕಾರ ಬಿಡುಗಡೆ ಮಾಡುತ್ತಿದೆ ಎಂದರು. 

ಕೊರೋನ ಸೋಂಕು ನಿವಾರಣೆಗಾಗಿ ಕಂದಾಯ ಇಲಾಖೆ ಹಾಗೂ ವಿಪತ್ತು ನಿರ್ವಹಣೆ ನಿಧಿಯಿಂದ 382 ಕೋಟಿ ರೂ. ಬಿಡುಗಡೆಗೊಳಿಸಿದ್ದು,  ಇನ್ನೂ 300 ಕೋಟಿಗೂ ಅಧಿಕ ಹಣ ಲಭ್ಯವಿದೆ. ಆರ್ಥಿಕತೆ, ನಿರುದ್ಯೋಗದ ಸಮಸ್ಯೆ ಉಲ್ಬಣಗೊಂಡಲ್ಲಿ ಈ ಹಣವನ್ನು ಸದುಪಯೋಗಪಡಿಸಿಕೊಳ್ಳಲಾಗುವುದು.

ಕೊರೋನ ನಡುವೆಯೂ ರಾಜ್ಯದಲ್ಲಿ ಅಭಿವೃದ್ಧಿಕಾರ್ಯಗಳು ಸರಾಗವಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದ ಅವರು, ಕೊರೋನ ನಿಯಂತ್ರಣಕ್ಕೆ ಜನರು ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತಾಗಲು ಸರಕಾರ ಜು.7ರಬಳಿಕ ಸೂಕ್ತ ಕ್ರಮಕೈಗೊಳ್ಳಿದೆ ಎಂದರು. 

ಕೊರೋನ ಸೋಂಕಿನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರಿಗೆ ಸರಕಾರ ಗೌರವಧನವನ್ನೂ ನೀಡುತ್ತಿದೆ. ಸರಕಾರಿ ವೈದ್ಯರು ಸೋಂಕಿನಿಂದ ಜೀವಹಾನಿಯಾದಲ್ಲಿ 50 ಲಕ್ಷ ರೂ. ಪರಿಹಾರ ನೀಡಲು ಸರಕಾರ ಕ್ರಮಕೈಗೊಂಡಿದೆ. ಈ ಯೋಜನೆಯನ್ನು ಖಾಸಗಿ ವೈದ್ಯರಿಗೂ ವಿಸ್ತರಿಸಲು ಸರಕಾರ ಕ್ರಮಕೈಗೊಂಡಿದೆ ಎಂದು ಇದೇ ವೇಳೆ ಆರ್.ಆಶೋಕ್ ತಿಳಿಸಿದರು.

ಇದೇ ವೇಳೆ ವಿಶ್ವ ವೈದ್ಯರ ದಿನದ ವಿಶೇಷವಾಗಿ ಕೊರೋನ ಸೋಂಕು ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತೆಯರು, ಸಿಬ್ಬಂದಿಯನ್ನು ಸ್ಮರಿಸಿದ ಸಚಿವ ಆರ್.ಅಶೋಕ್ ಹಾಗೂ ಸಿ.ಟಿ.ರವಿ ವೈದ್ಯರ ದಿನಾಚರಣೆಗೆ ಶುಭಾಶಯಗಳನ್ನು ಹೇಳಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮಾಜಿ ಸಚಿವ ಡಿ.ಎನ್.ಜೀವರಾಜ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಮಾಜಿ ನಗರ ಸಭಾ ಅಧ್ಯಕ್ಷ ಎಚ್.ಡಿ.ತಮ್ಮಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಚಿವ ಸಿ.ಟಿ.ರವಿ ಮಾತನಾಡಿ, ಹಿಂದಿನ ಸರಕಾರದ ಆತುರದ ನಿರ್ಧಾರದಿಂದಾಗಿ ನಗರದಲ್ಲಿ ನಿರ್ಮಾಣವಾಗಬೇಕಿದ್ದ ಡಿಸಿ ಕಚೇರಿಯ ನೂತನ ಸಂಕೀರ್ಣ ಕಾಮಗಾರಿ ಜಾಗದ ವಿವಾದದಿಂದಾಗಿ ನೆನೆಗುದಿಗೆ ಬಿದ್ದಿದೆ. ಈ ವಿವಾದ ಬಗೆಹರಿಸಿ ಸಮಸ್ಯೆ ಪರಿಹಾರಕ್ಕೆ ಬಿಜೆಪಿ ಸರಕಾರ ಪ್ರಯತ್ನ ನಡೆಸಿದೆ. ಹಿಂದಿನ ಡಿಸಿ ಅಂದಿನ ಸರಕಾರದ ಅಣತಿಯಂತೆ ಕುಣಿದಿದ್ದರಿಂದ ಸಮಸ್ಯೆ ಉದ್ಭವಿಸಿದೆ. ನಾನು ಅಂದೇ ಈ ಸಮಸ್ಯೆ ಬಗ್ಗೆ ಮನ್ಸೂಚನೆ ನೀಡಿದ್ದರೂ ಅಂದಿನ ಡಿಸಿ ನಿರ್ಲಕ್ಷ್ಯ ವಹಿಸಿದ್ದರು. ಸದ್ಯ ಜಾಗದ ಮಾಲಕರಿಗೆ 2 ಎಕರೆ ಬದಲಿ ಜಮೀನು ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯ ನೂತನ ಸಂಕೀರ್ಣವನ್ನು ನಗರದ ಮಧ್ಯೆ ಇರುವ ತೋಟಗಾರಿಕೆ ಇಲಾಖೆಯ 11 ಎಕರೆ ಜಾಗದಲ್ಲಿ ನಿರ್ಮಿಸಲು ಚಿಂತನೆ ನಡೆಸಲಾಗುವುದು. ಇಂದು ತಾಂತ್ರಿಕವಾಗಿ ಕಾರ್ಯಗತವಾದಲ್ಲಿ ನೆನೆಗುದಿಗೆ ಬಿದ್ದ ಡಿಸಿ ಕಚೇರಿ ಸಂಕೀರ್ಣದಲ್ಲಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಕೇಂದ್ರ ಮನವಿ: ಮಲೆನಾಡಿನ ಡೀಮ್ಡ್ ಫಾರೆಸ್ಟ್ ಸಂಬಂಧ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಡೀಮ್ಡ್ ಫಾರೆಸ್ಟ್ ಸಮಸ್ಯೆ ಕೇವಲ ಮಲೆನಾಡಿಗೆ ಮಾತ್ರ ಸೀಮಿತವಾಗಿಲ್ಲ. ಬಯಲುಸೀಮೆ ಜಿಲ್ಲೆಗಳಲ್ಲೂ ಈ ಸಮಸ್ಯೆ ಇದೆ. ಹಿಂದಿನ ಕಾಲದಲ್ಲಿ ಕಂದಾಯ ಇಲಾಖೆಯಲ್ಲಿದ್ದ ಜಾಗವನ್ನು ಅರಣ್ಯ ಇಲಾಖೆಗೆ ನೀಡಿದ್ದರಿಂದ ಈ ಸಮಸ್ಯೆ ಉದ್ಭವಿಸಿದೆ. ಸಮಸ್ಯೆ ಪರಿಹಾರಕ್ಕೆ ಸರಕಾರ ಅಗತ್ಯ ಕ್ರಮವಹಿಸಲಿದ್ದು, ಬಿಜೆಪಿ ಸರಕಾರ ಎಂದಿಗೂ ಜನರ ಪರನಾದ ಸರಕಾರವಾಗಿದ್ದು, ಜನರ ಪರವಾಗಿಯೇ ನಿರ್ಧಾರ ಕೈಗೊಳ್ಳಲಿದೆ ಎಂದ ಅವರು ಮಲೆನಾಡಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಸರಕಾರ ವಿರೋಧ ವ್ಯಕ್ತಪಡಿಸಿ ಕೇಂದ್ರಕ್ಕೆ ತನ್ನ ನಿಲುವನ್ನು ತಿಳಿಸಿದೆ ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News