ಆರೆಸೆಸ್ಸ್ ಅನ್ನು ಬಗ್ಗು ಬಡಿಯದಿದ್ದರೆ ದೇಶದ ಯುವಕರಿಗೆ ಭವಿಷ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2020-07-02 17:05 GMT

ಬೆಂಗಳೂರು, ಜು.2: ನರೇಂದ್ರ ಮೋದಿ ಹಾಗೂ ಅಮಿತ್ ಶಾರನ್ನು ವೈಭವೀಕರಿಸಲಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದರ ಹಿಂದೆ ಇರುವ ಆರೆಸೆಸ್ಸ್ ಅನ್ನು ಎಲ್ಲಿಯವರೆಗೆ ಬಗ್ಗು ಬಡಿಯುವುದಿಲ್ಲ, ಮೋದಿ ಹಾಗೂ ಶಾರನ್ನು ಹತ್ತಿಕ್ಕುವುದಿಲ್ಲ, ಅಲ್ಲಿಯವರೆಗೆ ಈ ದೇಶದ ಯುವಕರಿಗೆ, ಸಾಮಾನ್ಯ ಜನರಿಗೆ ಭವಿಷ್ಯ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಹಿಂಭಾಗದಲ್ಲಿರುವ ನೂತನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ, ಶಾ ಇಡೀ ದೇಶವನ್ನು ಹಾಳು ಮಾಡಲು ಕೆಟ್ಟ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಇಡೀ ದೇಶದಲ್ಲಿ ಕೊರೋನ ಹೆಚ್ಚಾಗಲು ಇವರಿಬ್ಬರೆ ಕಾರಣ ಎಂದು ದೂರಿದರು.

ನರೇಂದ್ರ ಮೋದಿ ಹಾಗೂ ಅಮಿತ್ ಶಾ ಏನೇ ತಪ್ಪುಗಳನ್ನು ಮಾಡಿದ್ದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ವಿರೋಧ ಪಕ್ಷದವರು ನೀಡುವ ಸಲಹೆಗಳನ್ನು ಕೇಳುವುದಿಲ್ಲ. ಕೇವಲ ಸುಳ್ಳು ಹೇಳಿಕೊಂಡು ಬಿಜೆಪಿಯನ್ನು ಬೆಳೆಸುತ್ತಿದ್ದಾರೆ. ಇವರಿಬ್ಬರ ತಪ್ಪು ನಿರ್ಧಾರಗಳಿಂದಾಗಿ ಇವತ್ತು ಎಂಎಸ್‍ಎಂಇ ವಲಯ ಪಾತಳಕ್ಕೆ ಇಳಿದಿದ್ದು, ಕೋಟ್ಯಂತರ ಜನ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನರೇಂದ್ರ ಮೋದಿ ಏನೇ ಹೇಳಿದರೂ ಯುವಕರು ಚಪ್ಪಾಳೆ ಬಾರಿಸುತ್ತಾರೆ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ಟೀಕೆಗಳನ್ನು ಮಾಡುತ್ತಿರುತ್ತಾರೆ. ಇವರದ್ದು ದ್ವೇಷದ ರಾಜಕಾರಣ. ಚೀನಾ ದೇಶದ ಸಂಸ್ಥೆ ರಾಜೀವ್ ಗಾಂಧಿ ಫೌಂಡೇಶನ್‍ಗೆ ದೇಣಿಗೆ ನೀಡಿದೆ. ಅದನ್ನು ಈಗಿನ ಪರಿಸ್ಥಿತಿಗೆ ಹೋಲಿಸಿ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. 1.45 ಕೋಟಿ ರೂ.ಕಾಂಗ್ರೆಸ್ ಪಡೆದಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಬಡವರು, ವಿಕಲಚೇತನರು, ದುರ್ಬಲರ ಪರವಾಗಿ ಕೆಲಸ ಮಾಡುತ್ತಿರುವ ರಾಜೀವ್ ಗಾಂಧಿ ಫೌಂಡೇಶನ್ ಕೇವಲ 20 ಲಕ್ಷ ರೂ.ಗಳನ್ನು ಪಡೆದುಕೊಂಡಿದೆ. ಉಳಿದ ಹಣ ಕೇಂದ್ರ ಸರಕಾರದ ಪಿಎಂ ವೆಲ್ಫೇರ್ ಫಂಡ್‍ಗೆ ಹೋಗಿದೆ. ನರೇಂದ್ರ ಮೋದಿ ಹೊಸದಾಗಿ ‘ಪಿಎಂ ಕೇರ್ಸ್ ಫಂಡ್’ ಎಂಬ ಟ್ರಸ್ಟ್ ಮಾಡಿದ್ದಾರೆ. ಅದರಲ್ಲಿ ಎಷ್ಟು ಜನ ಸದಸ್ಯರಿದ್ದಾರೆ, ಎಷ್ಟು ಹಣ ಸಂಗ್ರಹವಾಗಿದೆ, ಯಾರು ಯಾರು ದೇಣಿಗೆ ನೀಡಿದ್ದಾರೆ ಎಂಬ ಲೆಕ್ಕ ಕೊಡಲು ಮುಂದಾಗುತ್ತಿಲ್ಲ. ಆರ್ ಟಿಐ ಅಡಿಯಲ್ಲಿ ಮಾಹಿತಿ ಕೇಳಿದರೂ ಲೆಕ್ಕ ಕೊಡುತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಭಾರತ-ಚೀನಾ ಗಡಿಯಲ್ಲಿ ನಮ್ಮ ದೇಶದ 20 ಯೋಧರು ಹುತಾತ್ಮರಾದರು, 74 ಜನ ಗಾಯಾಳುಗಳಾಗಿದ್ದಾರೆ. ಗಡಿಯಲ್ಲಿ ಏನೂ ಆಗಿಲ್ಲ, ಚೀನಾದವರು ನಮ್ಮ ಗಡಿ ಪ್ರವೇಶ ಮಾಡಿಲ್ಲ ಎಂದು ಪ್ರಧಾನಿ ಹೇಳುತ್ತಾರೆ. ಹಾಗಾದರೆ, ನಮ್ಮ ಯೋಧರು ಹುತಾತ್ಮರಾದದ್ದು ಹೇಗೆ ಎಂಬ ಸತ್ಯವನ್ನು ಪ್ರಧಾನಿ ದೇಶದ ಮುಂದಿಡಲಿ ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದ ಮುಂದೆ ಅನೇಕ ಸವಾಲುಗಳಿವೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಕಟ್ಟುವುದೇ ನಮ್ಮ ಗುರಿ. ಡಿ.ಕೆ ಶಿವಕುಮಾರ್ ಹೆಗಲಿಗೆ ಹೆಗಲು ಕೊಟ್ಟು ಸಾಗಬೇಕು.  ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಪಕ್ಷದ ತತ್ವ, ಸಿದ್ಧಾಂತ ಬಿಡಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. 

ಸಂಘ ಸಂಸ್ಥೆಗಳಿಗೆ ಲೆಕ್ಕ ಕೇಳುವ ಕೇಂದ್ರ ಸರಕಾರ ತಾನು ಸಂಗ್ರಹಿಸುವ ಮೊತ್ತಕ್ಕೆ ಲೆಕ್ಕ ಕೊಡುತ್ತಿಲ್ಲ. ರಾಜೀವ್ ಗಾಂಧಿ ಫೌಂಡೇಶನ್‍ಗೆ ಚೀನಾದವರು 20 ಲಕ್ಷ ರೂ. ಕೋಟಿರುವುದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಆದರೆ, ಅದೇ ಚೀನಾ ಮೂಲದ ಸಂಸ್ಥೆಗಳಾದ ಹುವೈಯ್ 7 ಕೋಟಿ ರೂ., ಒನ್ ಪ್ಲಸ್ 1 ಕೋಟಿ ರೂ., ಟಿಕ್‍ಟಾಕ್ 30 ಕೋಟಿ ರೂ., ಪೇಟಿಎಂ 100 ಕೋಟಿ ರೂ.ಗಳನ್ನು ಪಿಎಂ ಕೇರ್ಸ್ ಫಂಡ್‍ಗೆ ನೀಡಿವೆ. ಒಟ್ಟಾರೆ 9860 ಕೋಟಿ ರೂ.ಗಳು ಪಿಎಂ ಕೇರ್ಸ್ ಫಂಡ್‍ಗೆ ಜಮೆಯಾಗಿರುವ ಮಾಹಿತಿಯಿದೆ.
-ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News