"ಎಸ್ಸಿಗೆ ಶೇ.17, ಎಸ್ಟಿಗೆ ಶೇ.7ಕ್ಕೆ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸ್ಸು"

Update: 2020-07-02 18:26 GMT

ಬೆಂಗಳೂರು, ಜು.2: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಪರಿಷ್ಕರಣೆ ಸಂಬಂಧ ರಚಿಸಿದ್ದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗವು ಎಸ್ಸಿ ಸಮುದಾಯಕ್ಕೆ ಶೇ.17 ಮತ್ತು ಎಸ್ಟಿ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ಹೆಚ್ಚಿಸಿ, ಅತಿ ಹಿಂದುಳಿದ ಸಮುದಾಯಗಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸರಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ನಗರದ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಅವರು ಆಯೋಗದ ವರದಿಯನ್ನು ಸಲ್ಲಿಕೆ ಮಾಡಿದರು.

ಪರಿಶಿಷ್ಟ ಜಾತಿಗೆ ಪ್ರಸ್ತುತ ಶೇ.15ರಷ್ಟು ಮೀಸಲಾತಿ ಇದ್ದು, ಅದನ್ನು ಶೇ.17ಕ್ಕೆ ಹೆಚ್ಚಳ ಮಾಡಬೇಕು ಮತ್ತು ಪರಿಶಿಷ್ಟ ಪಂಗಡಕ್ಕೆ ಹಾಲಿ ಶೇ.3ರಷ್ಟು ಇದೆ. ಅದನ್ನು ಶೇ.7ರಷ್ಟು ಹೆಚ್ಚಳ ಮಾಡಬಹುದು. ಅತಿ ಹಿಂದುಳಿದ ಸಮುದಾಯಗಳಾದ ಅಲೆಮಾರಿ ಜನಾಂಗ, ಆದಿವಾಸಿ, ಪೌರಕಾರ್ಮಿಕ ಸೇರಿದಂತೆ ಇತರೆ ಸಮುದಾಯಗಳಿಗೆ ಸರಿಯಾದ ಶಿಕ್ಷಣ ಲಭಿಸುತ್ತಿಲ್ಲ. 

ಹೀಗಾಗಿ ಈ ಸಮುದಾಯಗಳ ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜತೆಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯಾ ಆಧಾರವಾಗಿ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆಯೋಗದ ಅಧ್ಯಕ್ಷ ನ್ಯಾ. ನಾಗಮೋಹನ್ ದಾಸ್ ಅವರು ರಾಜ್ಯದ ನಾಲ್ಕು ವಿಭಾಗ ಮಟ್ಟದ ಜಿಲ್ಲೆಗಳಾದ ಕಲಬುರಗಿ, ಬೆಳಗಾವಿ, ಮೈಸೂರು ಮತ್ತು ಬೆಂಗಳೂರು ಜಿಲ್ಲೆಯಲ್ಲಿ ಅಹವಾಲು ಸ್ವೀಕರಿಸಿದೆ. ಅಲ್ಲದೇ, ಸಮಾಲೋಚನೆ ಸಭೆಗಳನ್ನು ನಡೆಸಲಾಗಿದೆ. ಆಯೋಗದ ಕಚೇರಿಯಲ್ಲಿ ಸಾರ್ವಜನಿಕರೊಂದಿಗೆ ಒಟ್ಟು 38 ಸಭೆಗಳನ್ನು ನಡೆಸಲಾಗಿದೆ. 

851 ಲಿಖಿತ ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿದ್ದವು. ಸರ್ಕಾರದ ವಿವಿಧ 47 ಇಲಾಖೆ, ಸಂಸ್ಥೆ, ನಿಗಮಗಳಿಗೆ ಪತ್ರ ಬರೆದು ಅಗತ್ಯ ಮಾಹಿತಿಗಳನ್ನು ಕ್ರೋಡೀಕರಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ.

ಇದಲ್ಲದೇ, ದೇಶದ ವಿವಿಧ ರಾಜ್ಯಗಳಿಗೂ ಭೇಟಿ ನೀಡಿ ಅಲ್ಲಿನ ಮೀಸಲಾತಿ ಪ್ರಮಾಣವನ್ನು ಅಧ್ಯಯನ ನಡೆಸಿದೆ. ಶೇ.50ಕ್ಕಿಂತ ಮೀಸಲಾತಿ ಮೀರಬಾರದು ಎಂಬ ನಿಯಮ ಇದ್ದರೂ ಹಲವು ರಾಜ್ಯಗಳು ಇದನ್ನು ಮೀರಿವೆ. ವಿಶೇಷ ಸಂದರ್ಭದಲ್ಲಿ ವಿಶಾಸಾರ್ಹ ದಾಖಲೆಗಳನ್ನು ಪರಿಶೀಲಿಸಿ ಮೀಸಲಾತಿ ವಿಸ್ತರಣೆ ಮಾಡಬಹುದು ಎಂಬ ಅಂಶವು ಸಂವಿಧಾನದಲ್ಲಿದೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಆಯೋಗದ ವರದಿ ಸಲ್ಲಿಕೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಆಯೋಗದ ತಜ್ಞ ಸಮಿತಿ ಸದಸ್ಯರಾದ ಡಾ.ಟಿ.ಆರ್.ಚಂದ್ರಶೇಖರ, ಎನ್.ಅನಂತ ನಾಯ್ಕ್, ಡಾ.ಸಂಧ್ಯಾರೆಡ್ಡಿ, ಬಿ.ರಾಜಶೇಖರ ಮೂರ್ತಿ, ಆಯೋಗದ ಕಾರ್ಯದರ್ಶಿ ಸಾಬೀರ್ ಅಹ್ಮದ್ ಮುಲ್ಲಾ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News