ವೈದ್ಯಕೀಯ ಸಾಮಗ್ರಿ ಖರೀದಿಯ 2,200 ಕೋಟಿ ರೂ. ಅವ್ಯವಹಾರದ ಬಗ್ಗೆ ಸರಕಾರ ಸ್ಪಷ್ಟನೆ ನೀಡಲಿ

Update: 2020-07-03 14:44 GMT

ಬೆಂಗಳೂರು, ಜು. 3: ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಪಾವತಿಸಿ ಖರೀದಿಸಲಾಗಿದೆ. ಇದಕ್ಕೆ ಸಮರ್ಥನೆಗಳಿಲ್ಲ ಎಂದು ಆರ್ಥಿಕ ಇಲಾಖೆ ಟಿಪ್ಪಣಿ ಇದೆ. ಈ ಪ್ರಕರಣದಲ್ಲಿ ಸುಮಾರು 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಮಾರ್ಚ್ 24ಕ್ಕೆ ಮುಂಚೆ ವಿಶ್ವದಲ್ಲಿ 4 ಲಕ್ಷದ 25 ಸಾವಿರ ಸಕ್ರಿಯ ಕೊರೋನ ಸೋಂಕು ಪ್ರಕರಣಗಳಿದ್ದವು. ಸುಮಾರು 19 ಸಾವಿರ ಮಂದಿ ಸಾವಿಗೀಡಾಗಿದ್ದರು. ಆಗ ಭಾರತದಲ್ಲಿ 536 ಮಂದಿಗೆ ಕೊರೋನ ಸೋಂಕು ದೃಢಪಟ್ಟಿತ್ತು ಮತ್ತು 10 ಮಂದಿ ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದರು. ಆದರೆ, ಈಗ ಭಾರತ ಕೊರೋನ ಸೋಂಕಿನಲ್ಲಿ ವಿಶ್ವದಲ್ಲೆ ನಾಲ್ಕನೆ ಸ್ಥಾನದಲ್ಲಿದೆ'' ಎಂದು ದೂರಿದರು.

ಸೋಂಕು ವ್ಯಾಪಿಸಲು ಸರಕಾರಗಳ ತಪ್ಪು ನಿರ್ಧಾರ ಕಾರಣ: ಮಾರ್ಚ್‍ನಿಂದ ಈವರೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಕೊರೋನ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಕಷ್ಟು ಸಮಯವಿದ್ದಾಗ್ಯೂ ಕೊರೋನ ಸೋಂಕು ವ್ಯಾಪಕವಾಗಿ ಹರಡಿದೆ. ಇದಕ್ಕೆ ಎರಡೂ ಸರಕಾರಗಳ ನಿರ್ಲಕ್ಷ್ಯ ಮತ್ತು ತಪ್ಪು ನಿರ್ಧಾರಗಳೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಶ್ವದ ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೋನ ಸೋಂಕಿತರ ಪರೀಕ್ಷೆಗೆ ಒಳಪಡಿಸುತ್ತಿರುವ ಜನರ ಪ್ರಮಾಣ ತುಂಬಾ ಕಡಿಮೆಯಿದೆ. ಅಮೆರಿಕಾದಲ್ಲಿ ಪ್ರತಿ 10 ಲಕ್ಷ ಮಂದಿಗೆ 1 ಲಕ್ಷ ಜನರನ್ನು, ಇಟಲಿಯಲ್ಲಿ 90 ಸಾವಿರ, ಇಂಗ್ಲೆಡ್‍ನಲ್ಲಿ 75 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ' ಎಂದು ಸಿದ್ದರಾಮಯ್ಯ ಅಂಕಿ-ಅಂಶಗಳನ್ನು ನೀಡಿದರು.

ಭಾರತದಲ್ಲಿ ಪ್ರತಿ 10 ಲಕ್ಷ ಮಂದಿಗೆ 6,943 ಜನರನ್ನು, ಕರ್ನಾಟಕದಲ್ಲಿ 9,741 ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರಿಂದ ಸೋಂಕಿತರ ಪತ್ತೆ ವಿಳಂಬವಾಗಿ ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡಿದೆ. ಪ್ರಧಾನಿ ನರೇಂದ್ರ ಮೋದಿ ಕೊರೋನ ಸೋಂಕು ನಿಯಂತ್ರಣದಲ್ಲಿ ಭಾರತ ನಂ-1 ಎನ್ನುತ್ತಿದ್ದರು. ಇತರೆ ದೇಶಗಳೊಂದಿಗೆ ಎಲ್ಲಿದೆ ಸಾಮ್ಯತೆ?' ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.

ಮೊನ್ನೆ ಬಳ್ಳಾರಿಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟ ನಾಲ್ವರ ಶವಗಳನ್ನು ಅಮಾನವೀಯವಾಗಿ ಒಂದೇ ಗುಂಡಿಯಲ್ಲಿ ಶವ ಸಂಸ್ಕಾರ ಮಾಡಲಾಯಿತು. ಆರೋಗ್ಯ ಸಚಿವರ ಜಿಲ್ಲೆಯಲ್ಲೇ ಇಷ್ಟು ನಿರ್ಲಕ್ಷವಾದರೆ ಹೇಗೆ ? ಇಷ್ಟು ದಿನಗಳಾದರೂ ಸರಕಾರ ಶವ ಸಂಸ್ಕಾರಕ್ಕೆ ಕನಿಷ್ಠ ಒಂದು ನಿಯಮ ರೂಪಿಸದೆ ಇರುವುದು ದುರದೃಷ್ಟಕರದ ಸಂಗತಿ' ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ತುಮಕೂರಿನಲ್ಲಿ ಮಹಿಳೆಯೊಬ್ಬರು ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಹಾಸಿಗೆ ಸಿಗದೆ ನಾಲ್ಕೈದು ಗಂಟೆ ಒದ್ದಾಡಿದ್ದಾರೆ. ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿ ದುಃಖವಾಯಿತು. ಕೊರೋನ ಸೋಂಕು ಕಂಡುಬಂದು ಮೂರು ತಿಂಗಳಾಯಿತು, ಇನ್ನೂ ಅಗತ್ಯ ಪ್ರಮಾಣದ ಹಾಸಿಗೆಗಳು ಲಭ್ಯವಿಲ್ಲ. ರಾಜ್ಯದಲ್ಲಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಜೀವಂತವಾಗಿದೆಯೇ?' ಎಂದು ವಾಗ್ದಾಳಿ ನಡೆಸಿದರು.

ಸರಕಾರವೇ ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕೊರೋನ ಸೋಂಕಿತರ ಚಿಕಿತ್ಸೆಗೆ ಲಭ್ಯವಿರುವ ಒಟ್ಟು ಹಾಸಿಗೆಗಳ ಪ್ರಮಾಣ 4,663. ಇದರಲ್ಲಿ 2,694 ಹಾಸಿಗೆಗಳು ಬಳಕೆಯಾಗುತ್ತಿದ್ದು, 1,969 ಹಾಸಿಗೆಗಳು ಲಭ್ಯವಿದೆಯಂತೆ. ನನ್ನ ಪ್ರಕಾರ ಈ ವೇಳೆಗೆ ರಾಜ್ಯದಲ್ಲಿ ಕನಿಷ್ಠ 30 ಸಾವಿರ ಹಾಸಿಗೆಗಳು ಲಭ್ಯವಿರಬೇಕಿತ್ತು' ಎಂದು ಸಿದ್ದರಾಮಯ್ಯ ತಿಳಿಸಿದರು.

ನಮ್ಮ ರಾಜ್ಯದಲ್ಲಿ ಸಕ್ರಿಯ ಕೊರೋನ ಸೋಂಕಿನ ಪ್ರಕರಣಗಳೇ 6 ಸಾವಿರಕ್ಕೂ ಹೆಚ್ಚಿದೆ. ಬೆಂಗಳೂರು ನಗರವೊಂದರಲ್ಲೇ ನಿತ್ಯ 900 ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಕೊರೋನ ಸೋಂಕಿನ ಚಿಕಿತ್ಸಾ ಕೇಂದ್ರಗಳ ಹಾಸಿಗೆಗಳು ಭರ್ತಿಯಾದರೆ ಉಳಿದವರ ಗತಿಯೇನು?' ಎಂದು ಸಿದ್ದರಾಮಯ್ಯ, ರಾಜ್ಯ ಸರಕಾರವನ್ನು ಕೇಳಿದರು.

ಮಣಿಪಾಲ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ಸುದರ್ಶನ್ ಬಲ್ಲಾಳ್ ಅವರು ಮುಂದಿನ ಒಂದೂವರೆ ತಿಂಗಳನಲ್ಲಿ ಬೆಂಗಳೂರು ನಗರವೊಂದರಲ್ಲೆ 40 ಸಾವಿರ ಜನ ಸೋಂಕಿಗೆ ಒಳಗಾಗಲಿದ್ದಾರೆ ಎಂದಿದ್ದಾರೆ. ಈ ರೀತಿ ಹಿಂದೆಯೂ ಹಲವು ತಜ್ಞರು ಎಚ್ಚರಿಕೆ ನೀಡಿದ್ದರ ಹೊರತಾಗಿಯೂ ಸರಕಾರ ಯಾರ ಮಾತನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿನಿತ್ಯ ಕೊರೋನ ಸೋಂಕಿತರಿಗೆ ಅಗತ್ಯ ಪ್ರಮಾಣದ ಆಹಾರ, ಔಷಧಿ, ವೆಂಟಿಲೇಟರ್ ಮತ್ತು ಹಾಸಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ವಸ್ತುನಿಷ್ಠ ಸುದ್ದಿ ಪ್ರಸಾರ ಮಾಡುತ್ತಿರುವ ಮಾಧ್ಯಮ ಮಿತ್ರರಿಗೆ ನನ್ನ ಧನ್ಯವಾದಗಳು. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಲಿ' ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಈ ವರೆಗೆ ಪಿಎಂ ಕೇರ್ಸ್‍ಗೆ ಸುಮಾರು 60 ಸಾವಿರ ಕೋಟಿ ರೂ.ಸಂಗ್ರಹವಾಗಿದೆ. ಇದು ಜನರ ದೇಣಿಗೆ, ಈ ಹಣದ ಬಗ್ಗೆ ಸರಕಾರ ಜನರಿಗೆ ಲೆಕ್ಕ ಕೊಡಬೇಕಲ್ಲವೇ? ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಹಣ ಬಂದಿದೆ ಎಂದು ರಾಜ್ಯ ಸರಕಾರವೂ ಜನರಿಗೆ ಹೇಳಬೇಕು. ಈ ಕಾರಣಕ್ಕಾಗಿಯೇ ಸರಕಾರ ಶ್ವೇತಪತ್ರ ಹೊರಡಿಸಬೇಕು ಎಂದು ನಾನು ಒತ್ತಾಯಿಸಿದ್ದು

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News