ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗದ ಕೋವಿಡ್ 19: ಮತ್ತೆ 42 ಸಾವು, 1,839 ಮಂದಿಗೆ ಪಾಸಿಟಿವ್

Update: 2020-07-04 15:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.4: ಕರ್ನಾಟಕದಲ್ಲಿ ಕೊರೋನ ವೈರಸ್ ತೀವ್ರಗತಿಯಲ್ಲಿ ಏರುತ್ತಿದ್ದು, ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದ ದೈನಂದಿನ ಸಾವಿರಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ.

ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ ಮತ್ತೆ 1,839 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 21,549 ಕ್ಕೆ ಏರಿಕೆಯಾಗಿದೆ. 

ಕಳೆದ 24 ಗಂಟೆಗಳಲ್ಲಿ 42 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ಅತೀ ಹೆಚ್ಚಿನ ಕೊರೋನ ಸಾವು ಪ್ರಕರಣ ದಾಖಲಾದ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು 24 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಬೀದರ್ 6, ದಕ್ಷಿಣ ಕನ್ನಡ 4, ಕಲಬುರಗಿ 3, ಧಾರವಾಡ 3, ಹಾಸನ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಈ ಮೂಲಕ ಸಾವಿನ ಸಂಖ್ಯೆ 335ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 1172, ದಕ್ಷಿಣ ಕನ್ನಡ 75, ಬಳ್ಳಾರಿ 73, ಬೀದರ್ 51, ಧಾರವಾಡ 45, ರಾಯಚೂರು 41, ಮೈಸೂರು 38, ಕಲಬುರಗಿ 37, ವಿಜಯಪುರ 37, ಮಂಡ್ಯ 35, ಉತ್ತರ ಕನ್ನಡ 35, ಶಿವಮೊಗ್ಗ 31, ಹಾವೇರಿ 28, ಬೆಳಗಾವಿ 27, ಹಾಸನ 25, ಉಡುಪಿ 18, ಚಿಕ್ಕಬಳ್ಳಾಪುರ 12, ತುಮಕೂರು 12, ಬೆಂಗಳೂರು ಗ್ರಾಮಾಂತರ 11, ಕೋಲಾರ 11, ದಾವಣಗೆರೆ 7, ಚಾಮರಾಜನಗರ 5, ಗದಗ 4, ಕೊಪ್ಪಳ 3, ಚಿಕ್ಕಮಗಳೂರು 3, ರಾಮನಗರ 2, ಯಾದಗಿರಿಯಲ್ಲಿ 1 ಪ್ರಕರಣ ಪಾಸಿಟಿವ್ ಬಂದಿದೆ.

ಒಟ್ಟಾರೆ ರಾಜ್ಯದಲ್ಲಿ 21,549 ಕೊರೋನ ಸೋಂಕಿತರ ಪೈಕಿ 9,244 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 439 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 335 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 11,966 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News