ಕೋವಿಡ್19 ಗೆ ರಾಜ್ಯದಲ್ಲಿ ಮತ್ತೆ 30 ಬಲಿ, 1,843 ಮಂದಿಗೆ ಪಾಸಿಟಿವ್: 25 ಸಾವಿರ ಮೀರಿದ ಸೋಂಕಿತರ ಸಂಖ್ಯೆ

Update: 2020-07-06 15:16 GMT

ಬೆಂಗಳೂರು, ಜು.6: ಕರ್ನಾಟಕದಲ್ಲಿ ಕೊರೋನ ವೈರಸ್ ತೀವ್ರಗತಿಯಲ್ಲಿ ಏರುತ್ತಿದ್ದು, ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದ ದೈನಂದಿನ ಸಾವಿರಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ.

ರವಿವಾರ ಸಂಜೆಯಿಂದ ಸೋಮವಾರ ಸಂಜೆವರೆಗೆ ರಾಜ್ಯದಲ್ಲಿ 1,843 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 25,317 ಕ್ಕೆ ಏರಿಕೆಯಾಗಿದೆ. 

ಕಳೆದ 24 ಗಂಟೆಗಳಲ್ಲಿ 30 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ಅತೀ ಹೆಚ್ಚಿನ ಕೊರೋನ ಸಾವು ಪ್ರಕರಣ ದಾಖಲಾದ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು 10 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಬೀದರ್ 8, ಮೈಸೂರು 3, ದಕ್ಷಿಣ ಕನ್ನಡ 2, ದಾವಣಗೆರೆ, ಬಳ್ಳಾರಿ, ಹಾಸನ, ಕೊಡಗು, ಬಾಗಲಕೋಟೆ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಈ ಮೂಲಕ ಸಾವಿನ ಸಂಖ್ಯೆ 401ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 981, ಬಳ್ಳಾರಿ 99, ಉತ್ತರ ಕನ್ನಡ 81, ಬೆಂಗಳೂರು ಗ್ರಾಮಾಂತರ 68, ಧಾರವಾಡ 56, ಕಲಬುರಗಿ 53, ಹಾಸನ 49, ಮೈಸೂರು 45, ಬೀದರ್ 44, ಉಡುಪಿ 40, ಮಂಡ್ಯ 39, ವಿಜಯಪುರ 36, ಯಾದಗಿರಿ 35, ದಕ್ಷಿಣ ಕನ್ನಡ 34, ಬಾಗಲಕೋಟೆ 33, ತುಮಕೂರು 31, ಶಿವಮೊಗ್ಗ 24, ಗದಗ 18, ಚಾಮರಾಜನಗರ 12, ರಾಮನಗರ 11, ಕೋಲಾರ 10, ಹಾವೇರಿ 9, ಕೊಪ್ಪಳ 9, ಚಿಕ್ಕಬಳ್ಳಾಪುರ 7, ರಾಯಚೂರು 6, ಚಿತ್ರದುರ್ಗ 6, ದಾವಣಗೆರೆ 3, ಚಿಕ್ಕಮಗಳೂರು ಮತ್ತು ಕೊಡಗು ತಲಾ 2 ಪ್ರಕರಣ ಪಾಸಿಟಿವ್ ಬಂದಿದೆ. 

ಒಟ್ಟಾರೆ ರಾಜ್ಯದಲ್ಲಿ 25,317 ಕೊರೋನ ಸೋಂಕಿತರ ಪೈಕಿ 10,527 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 680 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 401 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 14,385 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News